ADVERTISEMENT

ಚಾಮರಾಜನಗರ: 'ಕಾಯಕ ಶರಣರ ವಚನಗಳೇ ಇಂದಿನ ಸಂವಿಧಾನ'

ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಜ್ಞಾನ ಪ್ರಕಾಶ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 7:11 IST
Last Updated 11 ಫೆಬ್ರುವರಿ 2024, 7:11 IST
ಕಾಯಕ ಶರಣರ ಜಯಂತಿ ಸಮಾರಂಭದಲ್ಲಿ ಐವರು ವಚನಕಾರರ ಭಾವಚಿತ್ರಕ್ಕೆ ಜ್ಞಾನ ಪ್ರಕಾಶ ಸ್ವಾಮೀಜಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪುಷ್ಪಾರ್ಚನೆ ಮಾಡಿದರು
ಕಾಯಕ ಶರಣರ ಜಯಂತಿ ಸಮಾರಂಭದಲ್ಲಿ ಐವರು ವಚನಕಾರರ ಭಾವಚಿತ್ರಕ್ಕೆ ಜ್ಞಾನ ಪ್ರಕಾಶ ಸ್ವಾಮೀಜಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪುಷ್ಪಾರ್ಚನೆ ಮಾಡಿದರು   

ಚಾಮರಾಜನಗರ: ‘ಕಾಯಕ ಶರಣರ ವಚನಗಳೇ ಇಂದಿನ ಸಂವಿಧಾನವಾಗಿದೆ. ಐವರು ಕೂಡ ಜಾತಿ, ಧರ್ಮ, ವರ್ಣ, ವರ್ಗವನ್ನು ಮೀರಿದವರು. ಅವರ ವಚನಗಳು ಇಂದಿಗೂ ಪ್ರಸ್ತುತ’ ಎಂದು ಮೈಸೂರಿನ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಶನಿವಾರ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲ ವರ್ಗದ ಶರಣರಿದ್ದರು. ಅವರಲ್ಲಿ ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಉರಿಲಿಂಗಿಪೆದ್ದಿ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ ಎಂಬ ಐವರು ಕಾಯಕ ಶರಣರು ಪ್ರಮುಖರಾಗಿದ್ದರು. ಅವರ ಜೀವನ ಹಾಗೂ ಮೌಲ್ಯಗಳನ್ನು ಸಮಾಜಕ್ಕೆ ಬಿತ್ತರಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಆಚರಣೆ ಮಾಡುತ್ತಿದೆ’ ಎಂದರು.

ADVERTISEMENT

‘ಈಗ ಜನರ ನಡೆ ಒಂದು ಕಡೆ, ನುಡಿ ಒಂದು ಕಡೆ ಇದೆ. ಬೇಡುವವರ ಸಂಖ್ಯೆ ಜಾಸ್ತಿಯಾಗಿದೆ. ನಡೆ, ನುಡಿ ಒಂದಾಗದ ಕಾರಣ ಆಸ್ಪತ್ರೆಗಳು, ಕಾಯಿಲೆಗಳು ಹೆಚ್ಚಾಗುತ್ತಿವೆ. ಗೂಗಲ್‌ನಿಂದಾಗಿ ಪುಸ್ತಕ ಸಂಸ್ಕೃತಿ ನಾಶವಾಗುತ್ತಿದೆ. ಮಾದಾರ ಚನ್ನಯ್ಯ ಅವರು ಕಾಯಕಕ್ಕೆ ಹೆಚ್ಚು ಗೌರವ ತಂದು ಕೊಟ್ಟರು. ಉರಿಲಿಂಗಿಪೆದ್ದಿ ಅವರ 366  ಮಾದಾರ ಚನ್ನಯ್ಯ 12, ಡೋಹಾರ ಕಕ್ಕಯ್ಯ 13, ಮಾದಾರ ದೂಳಯ್ಯ 33 ವಚನಗಳು ಲಭ್ಯವಿದ್ದು ಇವುಗಳು ಮಾನವೀಯ ಮೌಲ್ಯಗಳನ್ನು ಹೊಂದಿವೆ’ ಎಂದು ತಿಳಿಸಿದರು.

‘ನಾವೀಗ ಮನುಷ್ಯರ ಭಾರತ ಕಟ್ಟಬೇಕಿದೆ. ಭಾರತ ಸಂವಿಧಾನ ಮಹತ್ತರವಾದದ್ದು. 12ನೇ ಶತಮಾನದಲ್ಲಿ ವಚನಗಳು ಹಾಗೂ ಬುದ್ದನ ಕಾಲದಲ್ಲಿ ತ್ರಿಪಿಟಕಗಳೇ ಸಂವಿಧಾನವಾಗಿತ್ತು. ಸಮ ಸಮಾಜ ನಿರ್ಮಾಣಕ್ಕಾಗಿ ಶರಣರ ವಚನಗಳನ್ನು ಅಧ್ಯಯನ ಮಾಡಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು. 

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಈಗಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಕಚ್ಚಾಟ ನಡೆಸಿ ಸಮಾಜದ ಶಾಂತಿ ಕದಡುತ್ತಿರುವುದು ವಿಪರ್ಯಾಸ. ಅಸ್ಪೃಶ್ಯತೆ ಹೋಗಲಾಡಿಸಲು ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಕಾಯಕ ಶರಣರ ವಚನಗಳ ಅಧ್ಯಯನ ಮೂಲಕ ಸಮಾಜದಲ್ಲಿರುವ ಕಂದಾಚಾರ, ಜಾತಿ ಪದ್ಧತಿಗಳನ್ನು ಹೋಗಲಾಡಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ‘12ನೇ ಶತಮಾನದಲ್ಲಿದ್ದ ಶರಣರು ಸಮಾಜದಲ್ಲಿದ್ದ ಅಂಕುಡೊಂಕುಗಳ ಕುರಿತು ಸರಳ ಭಾಷೆಯ ಮೂಲಕ ಸಾಮಾನ್ಯ ಜನರಿಗೆ ತಿಳಿಸುವ ಕಾರ್ಯ ಮಾಡಿದರು. ವಿದ್ಯಾರ್ಥಿಗಳು ಶರಣರ ವಚನಗಳನ್ನು ಅಧ್ಯಯನ ಮಾಡಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ ಓದಿನ ಕಡೆ ಗಮನ ಕೊಡಬೇಕು. ಪುಸ್ತಕಗಳನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು’ ಎಂದರು.

ಕಲಾವಿದರಾದ ದೊಡ್ಡಗವಿ ಬಸಪ್ಪ, ನಿಂಗಶೆಟ್ಟಿ, ಪ್ರಗತಿಪರ ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ, ಕನ್ನಡಪರ ಹೋರಾಟಗಾರ ನಾಗರಾಜು, ರವಿಕುಮಾರ್, ಗಾಯಕ ಸಿ.ಎಂ.ನರಸಿಂಹಮೂರ್ತಿ ಇತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.