ಕೊಳ್ಳೇಗಾಲ: ಇಲ್ಲಿನ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬ್ಯಾಸ್ಕೆಟ್ ಬಾಲ್ ಹಾಗೂ ಜಿಮ್ ಕಟ್ಟಡದ ಕಾಮಗಾರಿಯನ್ನು ಶಾಸಕ ಎ.ಆರ್ ಕೃಷ್ಣಮೂರ್ತಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಶುಕ್ರವಾರ ವೀಕ್ಷಣೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಕ್ರೀಡಾಪಟುಗಳು ಹೆಚ್ಚಾಗಿದ್ದಾರೆ. ಕ್ರೀಡೆ ಆರೋಗ್ಯಕ್ಕೆ ವೃದ್ಧಿ. ಹಾಗಾಗಿ ಯುವಕರು ಕೆಟ್ಟ ಚಟಗಳಿಗೆ ದಾಸರಾಗದೆ ಕ್ರೀಡೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಈಗಾಗಲೇ ಇಲ್ಲಿನ ಕ್ರೀಡಾಂಗಣ ಅರ್ಧಕ್ಕೆ ನಿಂತಿದೆ ಹಾಗಾಗಿ ಕಳೆದ ತಿಂಗಳು ಅನುದಾನ ತಂದು ಹೆಚ್ಚುವರಿ ಕಾಮಗಾರಿಗೆ ಭೂಮಿ ಪೂಜೆ ಮಾಡಿದೆ. ಬ್ಯಾಸ್ಕೆಟ್ ಬಾಲ್ ಕಾಮಗಾರಿಯು ಗುಣಮಟ್ಟದಿಂದ ಕೂಡಿದೆ ಅದನ್ನು ವೀಕ್ಷಣೆ ಮಾಡಲು ಬಂದಿದ್ದೇನೆ. ಇನ್ನು ಹೆಚ್ಚಿನ ಗುಣಮಟ್ಟದಲ್ಲಿ ಕಾಮಗಾರಿಯನ್ನು ಮಾಡಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
‘ನಗರಸಭೆ ವತಿಯಿಂದ ಜಿಮ್ ಕಟ್ಟಡ ಮಾಡಿದ್ದಾರೆ. ಆದರೆ ಇನ್ನೂ ಪೂರ್ಣವಾಗಿಲ್ಲ. ಹಾಗಾಗಿ ಯುವಜನ ಸೇವಾ ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಿದರೆ ಉಳಿದ ಕಾಮಗಾರಿಯನ್ನು ಮಾಡಿ ಜಿಮ್ ಪರಿಕರಣಗಳನ್ನು ಇಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು. ಜಿಮ್ ಪರಿಕರಗಳು ಸುಮಾರು 4 ವರ್ಷದಿಂದ ತುಕ್ಕು ಹಿಡಿಯುತ್ತಿದೆ. ಇನ್ನು ಎರಡು ದಿನದಲ್ಲಿ ಕಟ್ಟಡವನ್ನು ಹಸ್ತಾಂತರ ಮಾಡಿದ ಬಳಿಕ ಕಾಮಗಾರಿಯನ್ನು ಮುಕ್ತಾಯ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇನೆ’ ಎಂದರು.
ನಗರಸಭೆ ಅಧ್ಯಕ್ಷೆ ರೇಖಾ, ಉಪ ವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಬಸವರಾಜು, ಪೌರಾಯುಕ್ತ ರಮೇಶ್, ಯುವಜನ ಕ್ರೀಡಾ ಇಲಾಖೆ ಅಧಿಕಾರಿ ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.