ಚಾಮರಾಜನಗರ: ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿರುವುದು ರಾಜ್ಯದ ಗೃಹ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಡ್ರಗ್ಸ್ ತಯಾರಿಕ ಘಟಕ ಪತ್ತೆಯಾಗಿರುವುದು ಆತಂಕಕಾರಿ ವಿಚಾರ. ಮಹಾರಾಷ್ಟ್ರ ಪೊಲೀಸರು ಜಾಲ ಪತ್ತೆಹಚ್ಚಿದ್ದು ರಾಜ್ಯ ಪೊಲೀಸ್ ಇಲಾಖೆ ಮತ್ತು ಗೃಹ ಇಲಾಖೆಯ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ.
ರಾಜ್ಯದಲ್ಲಿ ವ್ಯಾಪಕವಾಗಿ ಡ್ರಗ್ಸ್ ಮಾರಾಟ ನಡೆಯುತ್ತಿರುವುದು ನಾಗರಿಕರಲ್ಲಿ ಭಯವನ್ನುಂಟು ಮಾಡಿದೆ. ಹದಿಹರೆಯದ ಯುವಕ ಯುವತಿಯರು ಮಾದಕ ವಸ್ತುಗಳ ವ್ಯಸನಿಗಳಾಗುವ ಆತಂಕ ಎದುರಾಗಿದೆ. ದೇಶದ ಭವಿಷ್ಯ ರೂಪಿಸುವ ಯುವ ಸಮುದಾಯವನ್ನು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಶಾಂತಮೂರ್ತಿ ದೂರಿದ್ದಾರೆ.
ಮೂಲಭೂತವಾದಿ ಸಂಘಟನೆಗಳು ನಾರ್ಕೋಟಿಕ್ ಜಿಹಾದ್ ಮೂಲಕ ಯುವಸಮುದಾಯವನ್ನು ಬಲಿತೆಗೆದುಕೊಳ್ಳಲು ಯತ್ನಿಸುತ್ತಿದ್ದು ಇಂತಹ ಹೀನ ಕೃತ್ಯವನ್ನು ಪಕ್ಷಾತೀತವಾಗಿ, ಜಾತ್ಯತೀತವಾಗಿ ವಿರೋಧಿಸಬೇಕಾಗಿದೆ. ಮಕ್ಕಳ ಭವಿಷ್ಯ ಹಾಳಾಗದಂತೆ ಎಚ್ಚರವಹಿಸಬೇಕಾಗಿದೆ. ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಆರೋಪಿಗಳ ಹಿಂದೆ ಪ್ರಬಲರು, ದೇಶದ್ರೋಹಿ ಸಂಘಟನೆಗಳ ಕೈವಾಡ ಶಂಕೆ ಇದ್ದು ತನಿಖೆ ನಡೆಸಬೇಕು. ಡ್ರಗ್ಸ್ ತಯಾರಿಕಾ ಘಟಕ ನಿರ್ಮಾಣದ ಹಿಂದಿರುವ ಎಲ್ಲರಿಗೂ ಶಿಕ್ಷೆಯಾಗಬೇಕು. ಡ್ರಗ್ಸ್ ದೇಶದ ಯಾವ ಭಾಗಗಳಿಗೆ ಸರಬರಾಜಾಗುತ್ತಿತ್ತು, ಪೂರೈಕೆದಾರರು ಯಾರು ಎಂಬ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಯಬೇಕು. ರಾಷ್ಟ್ರದ ಅಂತರಿಕ ಸುರಕ್ಷತೆಗೆ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗ್ರಹ ಇಲಾಖೆ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಶಾಂತಮೂರ್ತಿ ಕುಲಗಾಣ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.