ADVERTISEMENT

ಶಿವರಾತ್ರಿ ಸಂಭ್ರಮ: ಈಶ್ವರ ಧ್ಯಾನ, ಜಾಗರಣೆ

ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:37 IST
Last Updated 8 ಮಾರ್ಚ್ 2024, 16:37 IST
ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಾಲದಲ್ಲಿ ಶಿವರಾತ್ರಿ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನ ಪಡೆದರು
ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ದೇವಾಲದಲ್ಲಿ ಶಿವರಾತ್ರಿ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರ್ಶನ ಪಡೆದರು   

ಚಾಮರಾಜನಗರ/ಮಹದೇಶ್ವರ ಬೆಟ್ಟ: ಜಿಲ್ಲೆಯಾದ್ಯಂತ ಶುಕ್ರವಾರ ಭಕ್ತರು ಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮನೆ, ದೇವಾಲಯಗಳಲ್ಲಿ ಶಿವ ಪೂಜೆ, ಈಶ್ವರ ಧ್ಯಾನದಲ್ಲಿ ತೊಡಗಿ ಜಾಗರಣೆ ಮಾಡಿದರು.

ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಅಂಗವಾಗಿ ಬೆಳಿಗ್ಗೆಯಿಂದಲೇ ಎಣ್ಣೆ ಮಜ್ಜನ ಸೇವೆ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಸಾವಿರಾರು ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು. ರಾತ್ರಿ ಹೊತ್ತು ಸಾವಿರಾರು ಭಕ್ತರು ಜಾಗರಣೆ ನಡೆಸಿದರು.   

ಮಹಾಶಿವರಾತ್ರಿಯ ಅಂಗವಾಗಿ ಚಾಮರಾಜನಗರದ ಐತಿಹಾಸಿಕ ಚಾಮರಾಜೇಶ್ವರ ದೇವಸ್ಥಾನ, ಶ್ರೀಕಂಠೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಯಡಬೆಟ್ಟ ಮಹದೇಶ್ವರ, ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇವಸ್ಥಾನ, ಯಳಂದೂರಿನ ಗೌರೀಶ್ವರ, ಕಾಳಿಕಾಂಬ ಕಮಠೇಶ್ವರ ದೇವಸ್ಥಾನ ಗಡಿಭಾಗದ ಕೊಂಗಳ್ಳಿ ಶ್ರೀಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ– ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.

ADVERTISEMENT

ಗ್ರಾಮೀಣ ಭಾಗದ ಮಠಗಳು ಹಾಗೂ ದೇವಸ್ಥಾನಗಳಲ್ಲೂ ಹಬ್ಬದ ಅಂಗವಾಗಿ ಪೂಜೆ,ಜಾಗರಣೆ ಮಾಡಲಾಯಿತು.

ವಿಶೇಷ ಪೂಜೆ, ಜಾತ್ರೆ: ಭಕ್ತರು ಶಿವನಿಗೆ ಬಿಲ್ವಪತ್ರೆಗಳಿಂದ ಅರ್ಚಿಸಿದರು. ದೇವಸ್ಥಾನಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಮುಂಜಾನೆ ಶಿವನಿಗೆ ವಿಶೇಷ ಅಭಿಷೇಕ ನೆರವೇರಿತು. ಬಳಿಕ  ರುದ್ರಾಭಿಷೇಕ, ಇನ್ನಿತರ ಅಭಿಷೇಕಗಳು ನಡೆದವು. ಶಿವಲಿಂಗಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. 

ಮಾದಪ್ಪನ ಸನ್ನಿಧಿಯಲ್ಲಿ ಭಕ್ತ ಸಾಗರ: ಮಹಾ ಶಿವರಾತ್ರಿ ಅಂಗವಾಗಿ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಜಾತ್ರೆಯ ಎರಡನೇ ದಿನ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. 

ಶುಕ್ರವಾರ ಮುಂಜಾನೆ ಬೇಡಗಂಪಣ ಸಮುದಾಯದ ವಿಧಿ ವಿಧಾನಗಳಂತೆ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆಯನ್ನು ಮಾಡಿ ಮಹಾಮಂಗಳಾರತಿ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ ಇನ್ನಿತರ ಸೇವೆಗಳನ್ನು ನೆರವೇರಿಸಲಾಯಿತು. ಆ ಬಳಿಕ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಧರ್ಮ ದರ್ಶನವಲ್ಲದೆ, ₹100, ₹200, ₹500 ಶುಲ್ಕದ ವಿಶೇಷ ದರ್ಶನದ ಸಾಲನ್ನು ಏರ್ಪಡಿಸಲಾಗಿತ್ತು.

ಎರಡನೇ ದಿನವೂ ಕ್ಷೇತ್ರದಲ್ಲಿ ಭಕ್ತ ಸಾಗರವೇ ನೆರೆದಿತ್ತು. ಸಾವಿರಾರು ಭಕ್ತರು ಸ್ವಾಮಿಗೆ ಉರುಳು ಸೇವೆ, ಪಂಜಿನ ಸೇವೆ, ದೂಪದ ಸೇವೆ, ರುದ್ರಾಕ್ಷಿ ಮಂಟಪ, ಬಸವ ವಾಹನ, ಹುಲಿವಾಹನ, ಬೆಳ್ಳಿ ರಥೋತ್ಸವ, ಚಿನ್ನದ ರಥೋತ್ಸವ ಸೇವೆಗಳನ್ನು ನೆರವೇರಿಸಿದ ಬಳಿಕ ರಾತ್ರಿ ನಡೆದ ಜಾಗರಣೆ ಉತ್ಸವದಲ್ಲಿ ಪಾಲ್ಗೊಂಡರು. 

5.967 ಕೆಜಿ ಬೆಳ್ಳಿ ಮೂರ್ತಿ ಕಾಣಿಕೆ: ಚಾಮರಾಜನಗರದ ಗಾಳಿಪುರದ ಮಹದೇವು ಮತ್ತು ಕುಟುಂಬದವರು ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ 5.967 ಕೆಜಿ ತೂಕದ ಬೆಳ್ಳಿ ಉತ್ಸವ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದರು. 

ಮಹದೇವು ಅವರು ಹೊತ್ತಿರುವ ಹರಕೆಯಂತೆ ಉತ್ಸವ ಮೂರ್ತಿ ನೀಡಿದ್ದು, ಪ್ರಾಧಿಕಾರದ ಕಾರ್ಯದರ್ಶಿ ರಘು ಹಾಗೂ ಅಧಿಕಾರಿಗಳಿಗೆ ಹಸ್ತಾಂತರಿಸಿದರು. 

ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನಡೆದ ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಸ್ತೋಮ
ಚಾಮರಾಜನಗರದ ಗಾಳಿಪುರದ ಮಹದೇವು ಮತ್ತು ಕುಟುಂಬಸ್ಥರು ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ 5.967 ಕೆಜಿ ತೂಕದ ಬೆಳ್ಳಿಯ ಉತ್ಸವ ಮೂರ್ತಿಯನ್ನು ಕೊಡುಗೆಯಾಗಿ ನೀಡಿದರು 
ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮಸ್ಥರು ಕಪಿಲಾ ನದಿಯಿಂದ ನೀರನ್ನು ತಲೆಯಲ್ಲಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಗ್ರಾಮದತ್ತ ಸಾಗಿದರು
40 ಕಿ.ಮೀ. ದೂರದಿಂದ ಕಾಲ್ನಡಿಗೆಯಲ್ಲಿ ನೀರು ತಂದರು... 
ಚಾಮರಾಜನಗರ: ಶಿವರಾತ್ರಿ ದಿನದಂದು ತಾಲ್ಲೂಕಿನ ಹೆಗ್ಗೋಠಾರದ ಆರು ಕುಟುಂಬದವರು ಗ್ರಾಮದ ಸಿದ್ದರಾಮೇಶ್ವರ ದೇವಾಲಯದಲ್ಲಿ ಸ್ವಾಮಿಯ ಅಭಿಷೇಕಕ್ಕಾಗಿ 40 ಕಿ.ಮೀ ದೂರದಿಂದ ಕಾಲ್ನಡಿಗೆಯಲ್ಲಿ ನೀರು ತರುವ ವಿಶಿಷ್ಟ ಆಚರಣೆ ಶುಕ್ರವಾರ ನಡೆಯಿತು.  ಕಪಿಲಾ ನದಿಯಿಂದ ತಲೆ ಮೇಲೆ ಹೊತ್ತು ಬರಿಗಾಲಲ್ಲಿ ನಡೆದುಕೊಂಡು ಬಂದು ಶಿವನಿಗೆ ಅಭಿಷೇಕ ಮಾಡಲಾಗುತ್ತದೆ.  ಈ ಬಾರಿ ರಾಜು ಕುಮಾರಸ್ವಾಮಿ ಕುಮಾರ ಮಹದೇವಸ್ವಾಮಿ ಮತ್ತು ಬೇಡರಪುರದ ಮತ್ತೊಬ್ಬರು ಶುಕ್ರವಾರ ಮುಂಜಾನೆಯೇ ಹೊರಟು ನಂಜನಗೂಡು ತಾಲ್ಲೂಕಿನ ನಗರ್ಲೆ ಬಳಿಯ ಕಪಿಲಾ ನದಿಯಿಂದ ನೀರನ್ನು ಹೊತ್ತು ಬರಿಗಾಲಿನಲ್ಲಿ 40 ಕಿ.ಮೀ ನಡೆದುಕೊಂಡು ಬಂದು ಶಿವನಿಗೆ ಅಭಿಷೇಕ ಮಾಡಿದರು.  ಗ್ರಾಮದಲ್ಲಿ ಸುಮಾರು ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಸಿದ್ದರಾಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ಈ ವಿಶೇಷ ಆಚರಣೆ ನಡೆಯುತ್ತದೆ. ಕಪಿಲಾ ನದಿಯಿಂದ ನೀರು ತಂದು ಅಭಿಷೇಕ ನೆರವೇರಿಸುವ ಪದ್ಧತಿ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಈಗಲೂ ಗ್ರಾಮಸ್ಥರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಈ ಪದ್ಧತಿಯನ್ನು ಪಾಲಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.