ಚಾಮರಾಜನಗರ: ಪತ್ನಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಪತಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ತಾಲ್ಲೂಕಿನ ಮುಕ್ಕಡಹಳ್ಳಿ ಗ್ರಾಮದ ಸುರೇಶ್ ಶಿಕ್ಷಕ್ಕೆ ಒಳಗಾದ ವ್ಯಕ್ತಿ. ಕುಡಿತದ ಚಟ ಹೊಂದಿದ್ದ ಸುರೇಶ, 2017 ಜುಲೈನಲ್ಲಿ ಪತ್ನಿ ರತ್ನಮ್ಮಳನ್ನು ಕೊಲೆ ಮಾಡಿದ್ದ.
ಪ್ರಕರಣದ ವಿವರ: ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸುರೇಶ, ಯಾವಾಗಲೂ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ. ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುತ್ತಿದ್ದ. ಈ ವಿಚಾರವಾಗಿ ಆತ ಹಾಗೂ ರತ್ನಮ್ಮಳ ನಡುವೆ ಜಗಳವಾಗುತ್ತಿತ್ತು. ಅಗತ್ಯ ವಸ್ತುಗಳ ಖರೀದಿಗಾಗಿ ರತ್ನಮ್ಮ, ತವರು ಮನೆಯಿಂದ ಹಣ ತರುತ್ತಿದ್ದಳು.
ಟೈಲರ್ ಅಂಗಡಿಯಿಂದ ಮಗನ ಶಾಲಾ ಸಮವಸ್ತ್ರ ತರುವಂತೆ ರತ್ನಮ್ಮ ₹300 ಅನ್ನು ಸುರೇಶನಿಗೆ ಕೊಟ್ಟಿದ್ದಳು. ಆ ಹಣವನ್ನು ಮದ್ಯ ಖರೀದಿಸಲುಬಳಸಿದ್ದ ಸುರೇಶ, ಸಮವಸ್ತ್ರ ತಂದಿರಲಿಲ್ಲ. ಈ ವಿಚಾರವಾಗಿ 2017ರ ಜುಲೈ 12ರಂದು ರಾತ್ರಿ 9 ಗಂಟೆಗೆ ರತ್ನಮ್ಮ ಹಾಗೂ ಸುರೇಶನ ನಡುವೆ ಜಗಳವಾಗಿತ್ತು. ಮನೆಯಲ್ಲಿ ಕ್ಯಾನ್ನಲ್ಲಿದ್ದ ಸೀಮೆಎಣ್ಣೆಯನ್ನು ರತ್ನಮ್ಮ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದ. ರತ್ನಮ್ಮ ಹಾಗೂ ಅವರ ಮಗ ಜೋರಾಗಿ ಕಿರುಚಿಕೊಂಡಾಗ ಅಕ್ಕ ಪಕ್ಕದ ಮನೆಯವರು ಬಂದು ಬೆಂಕಿ ಆರಿಸಿದ್ದರು. ತೀವ್ರವಾಗಿ ಸುಟ್ಟಗಾಯಗಳಿಂದ ನರಳಾಡುತ್ತಿದ್ದ ರತ್ನಮ್ಮಳನ್ನು ಜಿಲ್ಲಾಸ್ಪತ್ರೆ, ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸಿಎಸ್ಐ ಮಿಷನ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಜುಲೆ 18ರಂದು ಬೆಳಿಗ್ಗೆ ರತ್ನಮ್ಮ ಮೃತಪಟ್ಟಿದ್ದಳು.
ಪ್ರಕರಣ ದಾಖಲಿಸಿದ್ದ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ, ಆರೋಪಿ ಸುರೇಶನ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿರುವ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ವಿನಯ್ ಅವರು ಆರೋಪಿಯನ್ನು ಅಪರಾಧಿಯೆಂದು ಘೋಷಿಸಿದ್ದು, ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ಅವರು ವಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.