ADVERTISEMENT

ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಭೂಕುಸಿತ

ದುರಸ್ತಿಗೆ ಕ್ರಮ ಕೈಗೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 16:11 IST
Last Updated 17 ಜುಲೈ 2020, 16:11 IST
ಸಾಲೂರು ಮಠಕ್ಕೆ ಹೋಗುವ ರಸ್ತೆಯ ತಡೆಗೋಡೆ ಕುಸಿದಿರುವುದು
ಸಾಲೂರು ಮಠಕ್ಕೆ ಹೋಗುವ ರಸ್ತೆಯ ತಡೆಗೋಡೆ ಕುಸಿದಿರುವುದು   

ಮಹದೇಶ್ವರ ಬೆಟ್ಟ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಇಲ್ಲಿ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಾಳಬೆಟ್ಟ ಹಾಗೂ ಬೆಟ್ಟದ ನಡುವೆ ಕೆಲವು ಕಡೆ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದೆ.

ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಸಿಗುವ ಐದನೇ ಮತ್ತು ಆರನೇ ತಿರುವಿನಲ್ಲಿ ರಸ್ತೆಯ ತಡೆಗೋಡೆಗಳು ಕುಸಿದಿದೆ.ಒಂಬತ್ತನೇ ತಿರುವಿನಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ.

ಸದ್ಯ ವಾಹನ ಸಂಚಾರಕ್ಕೆ ಏನೂ ತೊಂದರೆಯಾಗದಿದ್ದರೂ, ಇನ್ನಷ್ಟು ತೀವ್ರ ಮಳೆ ಬಂದರೆ ಕುಸಿತದ ಪ್ರಮಾಣ ಹೆಚ್ಚಾಗಿ ಸಂಚಾರಕ್ಕೆ ತೊಡಲಾಗಲಿದೆ ಎಂಬುದು ಭಕ್ತರ ವಾದ.

ADVERTISEMENT

‘ಮಹದೇಶ್ವರಸ್ವಾಮಿ ದೇವಾಲಯಕ್ಕೆಕೋಟ್ಯಂತರ ರೂಪಾಯಿ ಆಧಾಯ ಬರುತ್ತಿದ್ದರೂ, ದೇವಾಲಯಕ್ಕೆ ಸಂಪರ್ಕಿಸಲು ಗುಣಮಟ್ಟದ ರಸ್ತೆ ನಿರ್ಮಿಸಲು ಯಾರೂ ಆದ್ಯತೆ ನೀಡುತ್ತಿಲ್ಲ. ಲೋಕೋಪಯೋಗಿ ಇಲಾಖೆಯು ಕಳಪೆ ಕಾಮಗಾರಿ ನಡೆಸುವ ಕಂಪನಿಗಳಿಗೇ ಮತ್ತೆ ಮತ್ತೆ ಗುತ್ತಿಗೆ ನೀಡುತ್ತಿದೆ’ ಎಂದು ಸ್ಥಳೀಯರಾದ ಕಾಂತರಾಜು ಅವರು ಆರೋಪಿಸಿದರು.

‘ಬೆಟ್ಟದ ರಸ್ತೆಗಳು ಕೂಡ ಶಿಥಿಲಾವಸ್ಥೆ ತಲುಪಿದೆ. ಸಾಲೂರು ಮಠಕ್ಕೆ ತೆರಳುವ ರಸ್ತೆಯ ಮಧ್ಯ ಭಾಗದಲ್ಲಿ ತಡೆಗೋಡೆ ಕುಸಿದಿದ್ದು, ವಿದ್ಯುತ್‌ ಕಂಬ ಬೀಳುವಂತಹ ಸ್ಥಿತಿ ತಲುಪಿದೆ. ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿಲ್ಲ’ ಎಂದು ಅವರು ಹೇಳಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸುರೇಂದ್ರ ಅವರು, ‘ಎರಡು ಕಡೆ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಇದರಿಂದ ವಾಹನಗಳ ಓಡಾಡಕ್ಕೆ ತೊಂದರೆಯಾಗುವುದಿಲ್ಲ. ಮಳೆ ಬಂದರೂ ಭೂ ಕುಸಿತ ಉಂಟಾಗದ ರೀತಿಯಲ್ಲಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.