ADVERTISEMENT

ಬಿಲ್‌ ಕಲೆಕ್ಟರ್‌ ಆತ್ಮಹತ್ಯೆ?

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 17:28 IST
Last Updated 4 ಜೂನ್ 2020, 17:28 IST
ಬಸವರಾಜು
ಬಸವರಾಜು   

ಚಾಮರಾಜನಗರ: ತಾಲ್ಲೂಕಿನ ವೆಂಕಟಯ್ಯನಛತ್ರದಲ್ಲಿ ಮಹಿಳೆಯೊಬ್ಬರ ಮನೆಯ ಮುಂದೆ ಸ್ಥಳೀಯ ಗ್ರಾಮ ಪಂಚಾಯಿತಿಯ ಬಿಲ್‌ಕಲೆಕ್ಟರ್‌ ಬಸವರಾಜು (35) ಅವರ ಶವ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.

ಬಸವರಾಜು ಅವರ ದೇಹದಲ್ಲಿವಿಷ ಸೇರಿರುವುದು ದೃಢಪಟ್ಟಿದ್ದು, ಸಾವಿನ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ.

‘ಬಸವರಾಜು ಅವರ ಬಟ್ಟೆಯ ಜೇಬಿನಲ್ಲಿ ಮರಣಪೂರ್ವ ಪತ್ರ ಸಿಕ್ಕಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದೆ. ಈ ಪತ್ರವನ್ನು ಬಸವರಾಜು ಅವರೇ ಬರೆದಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಹೇಳಿದ್ದಾರೆ.

ADVERTISEMENT

‘ವೆಂಕಟಯ್ಯನಛತ್ರ ನಿವಾಸಿಯಾಗಿದ್ದ ಬಸವರಾಜು ಅವರಿಗೆ ಮದುವೆಯಾಗಿ ಒಂದು ವರ್ಷ ಗಂಡು ಮಗುವೂ ಇದೆ. ಹಾಗಿದ್ದರೂ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು. ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದರು. ಗಂಡನನ್ನು ಕಳೆದುಕೊಂಡಿದ್ದ ಆ ಮಹಿಳೆಯು ಬಸವರಾಜು ಮಾತ್ರವಲ್ಲದೇ ಬೇರೆ ವ್ಯಕ್ತಿಯೊಂದಿಗೂ ಸಲುಗೆಯಿಂದ ಇದ್ದರು. ಈ ವಿಷಯ ಗೊತ್ತಾಗಿ ಮನನೊಂದು ಬಸವರಾಜು ಅವರು ವಿಷ ಸೇವಿಸಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಬೆಳಿಗ್ಗೆ 6 ಗಂಟೆ ಸ್ಥಳೀಯರು ನಮಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ವಿಧಿವಿಧಾನಗಳ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಆದರೆ, ಸಂಬಂಧಿಸಿದ ಎಲ್ಲರನ್ನೂ ವಿಚಾರಣೆ ನಡೆಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ರಾಮಸಮುದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.