ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ಕೋವಿಡ್ನಿಂದಾಗಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ ಖಚಿತವಾದ ಒಂದು ಪ್ರಕರಣ ಸೇರಿದಂತೆ 51 ಪ್ರಕರಣಗಳು ದೃಢಪಟ್ಟಿವೆ. 12 ಮಂದಿ ಗುಣಮುಖರಾಗಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಕೆಬ್ಬೇಪುರ ಗ್ರಾಮದ 75 ವರ್ಷ ವೃದ್ಧರೊಬ್ಬರು ಇದೇ 8ರಂದು ಆಸ್ಪತ್ರೆಗೆ ದಾಖಲಾಗಿದ್ದು, ಭಾನುವಾರ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ಮೃತಪಟ್ಟವರ ಸಂಖ್ಯೆ 114ಕ್ಕೆ ಏರಿದೆ. ಬೇರೆ ಕಾರಣಗಳಿಂದ 20 ಮಂದಿ ನಿಧನರಾಗಿದ್ದಾರೆ.
ಜಿಲ್ಲೆಯಲ್ಲಿ ಸದ್ಯ 255 ಮಂದಿ ಸೋಂಕಿತರಿದ್ದಾರೆ. ಈ ಪೈಕಿ 177 ಮಂದಿ ಹೋಂ ಐಸೊಲೇಷನ್ನಲ್ಲಿದ್ದಾರೆ. ಐಸಿಯುನಲ್ಲಿ ಎಂಟು ಮಂದಿ ಇದ್ದಾರೆ.
ಭಾನುವಾರದ ಅಂಕಿ ಅಂಶಗಳೊಂದಿಗೆ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 7,366ಕ್ಕೆ ಏರಿದೆ. 6,977 ಮಂದಿ ಗುಣಮುಖರಾಗಿದ್ದಾರೆ.
ಭಾನುವಾರ 1,256 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, 1,200 ವರದಿಗಳು ನೆಗೆಟಿವ್ ಬಂದಿವೆ. 56 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಆರು ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಇರುವುದರಿಂದ, ಈ ಪ್ರಕರಣಗಳನ್ನು ಮೈಸೂರು ಜಿಲ್ಲೆಗೆ ವರ್ಗಾಯಿಸಲಾಗಿದೆ. ಜಿಲ್ಲೆಯ ಒಬ್ಬರಿಗೆ ಮೈಸೂರಿನಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಆ ಪ್ರಕರಣವನ್ನು ಜಿಲ್ಲೆಯ ಪಟ್ಟಿಗೆ ಸೇರಿಸಲಾಗಿದೆ.
51 ಮಂದಿ ಸೋಂಕಿತರಲ್ಲಿ ಚಾಮರಾಜನಗರ ತಾಲ್ಲೂಕಿನ 19, ಕೊಳ್ಳೇಗಾಲದ ಒಂಬತ್ತು, ಗುಂಡ್ಲುಪೇಟೆ ಮತ್ತು ಹನೂರಿನ ತಲಾ ಎಂಟು, ಯಳಂದೂರು ತಾಲ್ಲೂಕಿನ ಆರು ಮಂದಿ, ಹೊರ ಜಿಲ್ಲೆಯ ಒಬ್ಬರು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.