ADVERTISEMENT

ದುಗ್ಗಹಟ್ಟಿ ಬಹಿಷ್ಕಾರ ಪ್ರಕರಣ: ದೂರು ದಾಖಲು

ಬಹಿಷ್ಕಾರ ಹಿಂಪಡೆಯುವ ತನಕ ಕೇಸು ವಾಪಸ್ ಇಲ್ಲ: ದೂರುದಾರ, ಯಜಮಾನರಿಂದ ಅರೋಪ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 16:29 IST
Last Updated 28 ನವೆಂಬರ್ 2020, 16:29 IST
ದೂರುದಾರ ನಂಜುಂಡಸ್ವಾಮಿ
ದೂರುದಾರ ನಂಜುಂಡಸ್ವಾಮಿ   

ಯಳಂದೂರು:‌ ತಾಲ್ಲೂಕಿನ ದುಗ್ಗಹಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ದಂಪತಿಗೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಘಟನೆ ಸಂಬಂಧಶನಿವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೊಲೀಸರ ಮಧ್ಯಸ್ಥಿಕೆಯಲ್ಲಿ ಶನಿವಾರ ರಾತ್ರಿ ಯಜಮಾನರು ಮತ್ತು ದೂರುದಾರರ ಸಭೆ ನಡೆಯಿತು. ಒಮ್ಮತಕ್ಕೆ ಬರಲು ಎರಡೂ ಕಡೆಯವರಿಗೆ ಸೋಮವಾರದವರೆಗೆ ಅವಕಾಶ ನೀಡಲಾಗಿದೆ.

ಸಭೆಯಲ್ಲಿ ಮಾತನಾಡಿದ ಯಜಮಾನರಾದ ಜಯಸ್ವಾಮಿ ಅವರು, ‘ದೂರುದಾರ ನಂಜುಂಡಸ್ವಾಮಿ ಅವರಿಗೆ ಗ್ರಾಮದಲ್ಲಿ
ಬಹಿಷ್ಕಾರ ಅಥವಾ ದಂಡ ಹಾಕಿಲ್ಲ. ತಮ್ಮ ಜಮೀನಿನ ವಿವಾದ ಬಗೆಹರಿಸಿಕೊಳ್ಳುವ ಉದ್ದೇಶದಿಂದ ಬಹಿಷ್ಕಾರದ ನೆಪದಲ್ಲಿ ದೂರು ಸಲ್ಲಿಸಿದ್ದಾರೆ. ಅವರ ಒಡೆತನಕ್ಕೆ ಸೇರಿದ ಒಂದು ಎಕರೆ ಒಂದು ಗುಂಟೆ ಜಮೀನನನ್ನು ಯಾರೂ ಅತಿಕ್ರಮಣ ಮಾಡಿಲ್ಲ. ಜನ ಸಂಚಾರಕ್ಕೆ ಇರುವ ಸರ್ಕಾರಿ ಸ್ಥಳವನ್ನು ಬಿಟ್ಟು, ಅವರ ಜಮೀನು ಪಡೆಯಲು ನಮ್ಮ ಅಭ್ಯಂತರ ಇಲ್ಲ. ಅಧಿಕಾರಿಗಳೇಸ್ಥಳ ಪರಿಶೀಲನೆ ಮಾಡಿ, ಗ್ರಾಮಸ್ಥರ ಜಾಗವನ್ನು ಗುರುತು ಮಾಡಲಿ’ ಎಂದರು.

ADVERTISEMENT

ದೂರುದಾರ ನಂಜುಂಡಸ್ವಾಮಿ ಮಾತನಾಡಿ, ‘ಗ್ರಾಮಸ್ಥರು ನನಗೆ ₹25 ಸಾವಿರ ದಂಡ ವಿಧಿಸಿದ್ದಾರೆ. ಅದನ್ನು ನಾನು ಪಾವತಿಸುವುದಿಲ್ಲ. ಬಹಿಷ್ಕಾರ ವಾಪಸ್‌ ಪಡೆದು ಕುಲಸ್ಥರು ನನ್ನನ್ನು ಒಟ್ಟಿಗೆಸೇರಿಸಿಕೊಳ್ಳಬೇಕು. ಕೂಲಿ ಕೆಲಸಕ್ಕೆ ಕರೆಯಬೇಕು. ನನ್ನ ಜಮೀನಿನ ಸುತ್ತಲೂಒಡ್ಡು ನಿರ್ಮಾಣ ಮಾಡಿಕೊಂಡು, ಕೊಳಚೆ ನೀರನ್ನು ಸರ್ಕಾರಿ ಕಾಲುವೆಗೆ ತಿರುಗಿಸುತ್ತೇನೆ. ಪೊಲೀಸರು ಸೋಮವಾರದ ತನಕ ಗಡವು ನೀಡಿದ್ದು, ವಿವಾದಬಗೆಹರಿಸಿಕೊಳ್ಳಲು ಯಜಮಾನರಿಗೆ ಸೂಚಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ, ದೂರು ವಾಪಸ್ ಹಿಂಪಡೆಯುವುದಿಲ್ಲ’ ಎಂದು ಹೇಳಿದರು.

ಈ ಬಗ್ಗೆ ಸಬ್ ಇನ್‌ಸ್ಪೆಕ್ಟರ್‌ ‌ಕರಿಬಸಪ್ಪ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಶನಿವಾರ ರಾತ್ರಿ ಗ್ರಾಮದ ಯಜಮಾನರು ಮತ್ತು ದೂರುದಾರರ ಸಭೆ ನಡೆಸಲಾಗಿದೆ. ಜಮೀನಿನ ದಾಖಲೆಗಳನ್ನುಸೋಮವಾರ ಒದಗಿಸುವಂತೆ ದೂರುದಾರರಿಗೆ ತಿಳಿಸಲಾಗಿದೆ. ಸೆಕ್ಷನ್ 107ರ ಅಡಿದೂರುದಾಖಲಾಗಿದೆ. ಬಹಿಷ್ಕಾರ ಪ್ರಕರಣ ಇತ್ಯರ್ಥ ಆಗುವ ತನಕ ಗ್ರಾಮದಲ್ಲಿ ಶಾಂತಿಭಂಗಉಂಟುಮಾಡದಂತೆ ಎಚ್ಚರಿಕೆ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.