ADVERTISEMENT

ಪ್ರಧಾನಿ ಜನ್ಮದಿನ: ಚಾಮರಾಜನಗರದಲ್ಲಿ 1000ಕ್ಕೂ ಹೆಚ್ಚು ಗಿಡಗಳ ವಿತರಣೆ

ಭಾರತ ರಕ್ಷಾ ಮಂಚ್‌ನಿಂದ ವಿಶಿಷ್ಟ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 15:00 IST
Last Updated 17 ಸೆಪ್ಟೆಂಬರ್ 2020, 15:00 IST
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ವೆಂಕಟೇಶ್‌ ಅವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ವೆಂಕಟೇಶ್‌ ಅವರನ್ನು ಸನ್ಮಾನಿಸಲಾಯಿತು   

ಚಾಮರಾಜನಗರ:ಪ್ರಧಾನಿ ನರೇಂದ್ರಮೋದಿ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ಭಾರತ ರಕ್ಷಾ ಮಂಚ್ ಪದಾಧಿಕಾರಿಗಳು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಜನ್ನಬಸವ ಸ್ವಾಮೀಜಿ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ದೇಶದ ಪ್ರಧಾನಿ ಅವರ ಜನ್ಮದಿನವನ್ನು ಸಾರ್ವಜನಿಕರಿಗೆ ಗಿಡ ವಿತರಿಸಿ, ಪರಿಸರದ ಬಗ್ಗೆ ಜಾಗೃತಿ ಮೂಡಿಸು‌ವ ಮೂಲಕ ಆಚರಿಸುಸುತ್ತಿರುವುದು ಶ್ಲಾಘನೀಯ.ಪರಿಸರ ಅಸಮತೋಲನದಿಂದಾಗಿ ಮಾನವರ ಜೀವನ ಕ್ರಮದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರ ಉಳಿಸಿ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಹೇಳಿದರು.

ADVERTISEMENT

‘ದೇಶ ಕಂಡ ಉತ್ತಮ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಅವರು ಒಬ್ಬರು. ದೇಶದ ಅಭಿವೃದ್ದಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಪರಿಸರ ಪ್ರೇಮವು ಅವರಲ್ಲಿದೆ. ಭಗವಂತ ಅವರಿಗೆ ಮತ್ತಷ್ಟು ಆಯುರಾರೋಗ್ಯ ನೀಡಲಿ’ ಎಂದು ಹಾರೈಸಿದರು.

ಮಂಚ್‌ನ ರಾಜ್ಯ ಉಪಾಧ್ಯಕ್ಷ ಮಹದೇವಪ್ರಸಾದ್ ಅವರು ಮಾತವಾಡಿ, ‘ಮೋದಿ ಅವರಂತಹ ಪ್ರಧಾನಿ ದೊರೆತಿರುವುದು ನಮ್ಮ ಭಾಗ್ಯ. ದೇಶದ ಘನತೆಯನ್ನು ಎತ್ತಿ ಹಿಡಿದು ಪ್ರಪಂಚವೇ ಮೆಚ್ಚುವಂತಹ ಆಡಳಿತ ನೀಡುತ್ತಿದ್ದಾರೆ’ ಎಂದರು.

ಮಂಚ್‌ನ ಜಿಲ್ಲಾಧ್ಯಕ್ಷ ಶ್ರೀಕಂಠಸ್ವಾಮಿ ಅವರು ಮಾತನಾಡಿ, ‘ಗಿಡ ಪಡೆದ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ ಅಥವಾ ರಸ್ತೆಯ ಬದಿ ನೆಟ್ಟು ಪೋಷಿಸಿ ಪರಿಸರವನ್ನು ರಕ್ಷಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಗಾಳಿ ಬೆಳಕು ದೊರಕುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.

ಸನ್ಮಾನ: ಜಿಲ್ಲಾ ಕೇಂದ್ರದಲ್ಲಿ ಸಾವಿರಾರು ಗಿಡನೆಟ್ಟು ಪರಸರ ರಕ್ಷಿಸಿ, ಪರಿಸರ ಜಾಗೃತಿ ಮೂಡಿಸುತ್ತಿರುವ ಪರಿಸರ ಪ್ರೇಮಿ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.

ಮಂಚ್‌ನ ಜಿಲ್ಲಾ ಉಪಾಧ್ಯಕ್ಷ ನಟರಾಜು, ಖಜಾಂಚಿ ಶಿವಣ್ಣ, ಬಸ್ ಮಾಲೀಕರಾದ ನಟರಾಜು, ಯೋಗೇಶ್, ನಗರಸಭಾ ಸದಸ್ಯರಾದ ಶಿವರಾಜ್, ಬಸವಣ್ಣ, ಮುಖಂಡರಾದ ಮಹದೇವನಾಯಕ, ಸುರೇಶ್‌ನಾಯಕ, ಡಾ. ಪರಮೇಶ್ವರಪ್ಪ, ಕಾವುದವಾಡಿ ಗುರು, ಸೇಂಧಿಲ್, ಕೆಎಲ್ ಮಹದೇವಸ್ವಾಮಿ, ಬಸವನಪುರ ಮಹದೇವಸ್ವಾಮಿ, ಶೈಲೇಶ್, ಮಾದಾಪುರ ರವಿಕುಮಾರ್, ಪೃಥ್ವಿರಾಜ್, ರಾಜು, ಮಹೇಶ್, ನಂಜುಂಡನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.