ADVERTISEMENT

ಸಂತೇಮರಹಳ್ಳಿ: ಪರಿಣಾಮಕಾರಿ ಬೋಧನೆಗೆ ಸಲಕರಣೆಗಳ ನೆರವು

ಅಂತರ್ಜಾಲದ ಮೂಲಕ ಆಡಿಯೊ, ವಿಡಿಯೊ, ಪ್ರಾತ್ಯಕ್ಷಿಕೆ ಮೂಲಕ ಪಾಠ

ಮಹದೇವ್ ಹೆಗ್ಗವಾಡಿಪುರ
Published 5 ನವೆಂಬರ್ 2022, 7:44 IST
Last Updated 5 ನವೆಂಬರ್ 2022, 7:44 IST
ಗ್ಲೋಬ್ (ಗೋಳ) ಮೂಲಕ ಪ್ರಾತ್ಯಕ್ಷಿಕೆ ನೀಡುತ್ತಿರುವ ವಿದ್ಯಾರ್ಥಿನಿ
ಗ್ಲೋಬ್ (ಗೋಳ) ಮೂಲಕ ಪ್ರಾತ್ಯಕ್ಷಿಕೆ ನೀಡುತ್ತಿರುವ ವಿದ್ಯಾರ್ಥಿನಿ   

ಸಂತೇಮರಹಳ್ಳಿ: ಶಾಲೆಗಳಲ್ಲಿ ‍ಪ‍ಠ್ಯ ಬೋಧನೆ ಲವಲವಿಕೆಯಿಂದ ಇದ್ದರೆ, ಚಟುವಟಿಕೆ ಆಧಾರಿತವಾಗಿ ಇದ್ದರೆ ಮಕ್ಕಳಿಗೆ ಬಹುಬೇಗ ಅರ್ಥವಾಗುತ್ತದೆ.

ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಬಳಸಲಾಗುತ್ತಿರುವ ಆಧುನಿಕ ತಂತ್ರಜ್ಞಾನ, ವೈವಿಧ್ಯಮಯ ಪಠ್ಯ ಸಲಕರಣೆಗಳು ಪರಿಣಾಮಕಾರಿ ಕಲಿಕೆಗೆ ಕಾರಣವಾಗಿವೆ. ಸಂತೇಮರಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಠ್ಯ ಉಪಕರಣಗಳು, ತಂತ್ರಜ್ಞಾನ ಆಧಾರಿತ ಬೋಧನೆಯ ಪ್ರಯೋಗ ಯಶಸ್ವಿಯಾಗಿ ನಡೆಯುತ್ತಿದೆ.ಪ್ರೊಜೆಕ್ಟರ್, ಕಂಪ್ಯೂಟರ್, ಮೊಬೈಲ್‌ಗಳನ್ನು ಪಠ್ಯಕ್ಕೆ ಪೂರಕವಾಗಿ ಬಳಸಲಾಗುತ್ತಿದೆ.

‘ಸಮಾಜ ವಿಜ್ಞಾನ ಸಂಕೀರ್ಣ ವಿಷಯ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಭೂಗೋಳ ವಿಜ್ಞಾನ ವಿಷಯಗಳನ್ನು ಶಾಲೆಯಲ್ಲಿ ಪ್ರಾತ್ಯಕ್ಷಿಕೆ, ಕ್ಷೇತ್ರ ಭೇಟಿ ಹಾಗೂ ಅಂತರ್ಜಾಲದ ಮಾಹಿತಿಯನ್ನು ಬಳಸಿಕೊಂಡು ವಿಷದವಾಗಿ ಮಕ್ಕಳಿಗೆ ಮನಗಾಣಿಸಬಹುದು. ಚರಿತ್ರೆ, ಭೂ ಅಧ್ಯಯನಗಳನ್ನು ಸ್ಥಳಕ್ಕೆ ಭೇಟಿ ನೀಡಿ ಸ್ಪರ್ಶಿಸಿ ವೀಕ್ಷಿಸಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಬಹುದು. ಮಾರುಕಟ್ಟೆ ಬೆಲೆ, ಧಾರಣೆ ಸಂವಿಧಾನ ಮೊದಲಾದ ಮಾಹಿತಿಗಳನ್ನು ಯುಟ್ಯೂಬ್ ಮೂಲಕ ಪ್ರದರ್ಶಿಸಿ ಕಲಿಯುವುದರಿಂದ ವಿಷಯ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ’ ಎಂಬುದು 9ನೇ ತರಗತಿಯ ವಿದ್ಯಾರ್ಥಿಗಳಾದ ಮಹಾಲಕ್ಷ್ಮಿ ಹಾಗೂ ವರ್ಷಿಣಿ ಮಾತು.

ADVERTISEMENT

‘ಸ್ವಾತಂತ್ರ್ಯ ಚಳುವಳಿ, ಭೂಮಿಯ ದೈನಂದಿನ ವಾರ್ಷಿಕ ಚಲನೆ ಹಾಗೂ ಹಗಲು ರಾತ್ರಿಗಳನ್ನು ಆಡಿಯೊ ಮತ್ತು ವಿಡಿಯೊ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲು ಈಗ ಅವಕಾಶ ಇದೆ’ ಎಂದು ಸಮಾಜ ವಿಜ್ಞಾನ ಶಿಕ್ಷಕಿ ಮಹದೇವಮ್ಮ ಹೇಳಿದರು.

‘ಷೇರು ಮಾರುಕಟ್ಟೆ, ಡಾಲರ್ ವಿನಿಮಯ, ಜಾಗತಿಕ ವ್ಯವಹಾರಗಳನ್ನು ಕೂಡ ಅಂತರ್ಜಾಲದ ಮೂಲಕ ತರಗತಿಯಲ್ಲಿ ಮಕ್ಕಳಿಗೆ ತೋರಿಸಬಹುದು. ಅರಣ್ಯ, ನೆಲ, ಜಲ, ವಾಯು ಮೊದಲಾದ ಪ್ರಾಕೃತಿಕ ಸಂಪತ್ತಿನ ಮಹತ್ವವನ್ನು ಸುಲಭವಾಗಿ ಮತ್ತು ಮನ ಮುಟ್ಟುವಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಕಲಿಯಬಹುದು’ ಎಂದು ಶಿಕ್ಷಕ ಸ್ವಾಮಿ ಹೇಳಿದರು.

ತರಗತಿಯಲ್ಲಿ ಭೂಗೋಳ, ಭೂಪಟ, ಭೂಕಂಪದ ವಿಧಾನ, ಮಳೆ ಮೊದಲಾದ ಮಾಹಿತಿಗಳನ್ನು ಸ್ಥಳಾಕೃತಿ (ಟೋಪೋಗ್ರಪಿ) ಮೂಲಕ ಅರಿಯಬಹುದು. ರೇಖಾಂಶ ಅಕ್ಷಾಂಶಗಳ ಪರಿಕಲ್ಪನೆಗಳನ್ನು ಅತ್ಯಂತ ಸುಲಭವಾಗಿ ಆಟ ಪಾಠ ಮತ್ತು ವಿಡಿಯೊ ಚಿತ್ರಗಳ ಮೂಲಕ ಮಕ್ಕಳಿಗೆ ಪ್ರಯೋಗೀಕರಿಸಲು ವೈಜ್ಞಾನಿಕ ತಾಂತ್ರಿಕತೆಗಳು ನೆರವಾಗಿವೆ.

ಕಲಿಕೆಯಲ್ಲಿ ಹೊಸತನ...

'2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗೂ 2020ರ ಹೊಸ ಶಿಕ್ಷಣ ನೀತಿ ಮಕ್ಕಳ ಕಲಿಕೆಗೆ ಹೊಸತನ ತುಂಬಿವೆ. ಪ್ರತಿ ವಿಷಯವನ್ನು ಒರೆ ಹಚ್ಚಿ ಕಲಿತು ತಮ್ಮ ಸುತ್ತ ಮುತ್ತಲಿನ ಸರಳ ವಿಷಯಗಳಿಂದ ಸಂಕೀರ್ಣತೆಯೆಡೆಗೆ ಚಿಂತನೆ ನಡೆಸುವುದನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಕೋವಿಡ್ ನಡುವೆ ಉಂಟಾಗಿದ್ದ ಕಲಿಕಾ ಅಂತರವನ್ನು ತುಂಬಲು ಸಮಾಜ ವಿಜ್ಞಾನ ಪಾಠಗಳು ನೆರವಾಗಿವೆ’ ಎಂದು ಮುಖ್ಯ ಶಿಕ್ಷಕ ಶಿವಣ್ಣ ಹೇಳಿದರು.

‘ಮಕ್ಕಳನ್ನು ಗ್ರಾಮೀಣ ಭಾಗಗಳಿಗೆ ಕರೆದುಕೊಂಡು ಹೋಗಿ ಚಾರಿತ್ರಿಕ ಸ್ಥಳಗಳ ದರ್ಶನ ಮತ್ತು ಮಾಸ್ತಿಗಲ್ಲು ವೀರಗಲ್ಲುಗಳ ಬಗ್ಗೆ ಮಾಹಿತಿ ನೀಡುವುದು. ನಾಣ್ಯಗಳನ್ನು ಸಂಗ್ರಹಿಸಿ ಇತಿಹಾಸ ರಚನೆಗೆ ಪೂರಕ ಮಾಹಿತಿ ಕಲೆ ಹಾಕುವುದು ತಾಳೆ ಗರಿಗಳ ಪ್ರದರ್ಶನ ಹಾಗೂ ಆಯಾ ಗ್ರಾಮಗಳ ಹೆಸರು ಬಂದ ಬಗೆಯನ್ನು ಪೋಷಕರಿಂದ ಹೇಳಿಸಿಕೊಳ್ಳುವುದು ಕ್ರಿಯಾ ಚಟುವಟಕೆಗಳಾಗಿವೆ’ ಎಂದು 10ನೇ ತರಗತಿಯ ವಿದ್ಯಾರ್ಥಿನಿ ಜ್ಯೋತಿ ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.