ಚಾಮರಾಜನಗರ: ನಗರ ಸೇರಿದಂತೆಜಿಲ್ಲೆಯ ವಿವಿಧೆಡೆ ಬುಧವಾರ ಬೆಳಿಗ್ಗೆ ಆಗಸದಲ್ಲಿ ಸೂರ್ಯನ ಸುತ್ತ ಬಣ್ಣಗಳಿಂದ ಕೂಡಿದ ವೃತ್ತಾಕಾರದ ರಚನೆ ಗೋಚರಿಸಿತು.
ಅಪರೂಪದ ಈ ವಿದ್ಯಮಾನ ಜನರಲ್ಲಿ ಕುತೂಹಲ ಮೂಡಿಸಿತು. ಬೆಳಿಗ್ಗೆ 11 ಗಂಟೆ ನಂತರ ಗೋಚರಿಸಿದ ಉಂಗುರ ಸುಮಾರು ಮುಕ್ಕಾಲು ಗಂಟೆ ಕಂಡು ಬಂತು. ಅಚ್ಚರಿಗೊಂಡ ಜನರು ಮೊಬೈಲ್, ಕ್ಯಾಮೆರಾಗಳಲ್ಲಿ ಕೌತುಕವನ್ನು ಸೆರೆ ಹಿಡಿದರು.
ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿರುವ ಮಂಜಿನ ಹರಳುಗಳ ಮೇಲೆ ಬೆಳಕು ಬಿದ್ದು ವಕ್ರೀಭವನಗೊಂಡಾಗ ಕಾಮನಬಿಲ್ಲುವಿನ ಮಾದರಿಯ ಬಣ್ಣಗಳನ್ನು ಹೊಂದಿರುವ ವೃತ್ತ ಗೋಚರಿಸುತ್ತದೆ.
ಕಳೆದ ವರ್ಷ ಮೇ 25ರಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಇದೇ ಮಾದರಿಯ ಉಂಗುರ ಗೋಚರಿಸಿತ್ತು.
ವೈಜ್ಞಾನಿಕ ಹಿನ್ನೆಲೆ: ’ಹಿಮದ ಕಣಗಳ ಮೂಲಕ ಬೆಳಕು ಹಾದು ಬಂದಾಗ ಈ ರೀತಿ ಉಂಗುರ ಕಾಣುತ್ತದೆ. ಮೋಡಗಳು ತೆಳ್ಳಗೆ ಇದ್ದಾಗ ಈ ರೀತಿಯ ವಿಸ್ಮಯಗಳು ಸಂಭವಿಸುತ್ತವೆ. ತೆಳ್ಳನೆಯ ಮೋಡಗಳು ಇರುವಲ್ಲಿ ಸೂರ್ಯನ ಸುತ್ತ ಈ ರೀತಿಯ ವೃತ್ತ ರಚನೆಯಾಗಿರುವುದು ಕಾಣಿಸುತ್ತದೆ. ಮಳೆ ಸುರಿಯುವ ಮುನ್ನ ತೆಳ್ಳನೆಯ ಮೋಡಗಳು ಆವರಿಸಿಕೊಳ್ಳುತ್ತವೆ. ಕಪ್ಪು ಮೋಡಗಳು ಇದ್ದರೆ ಬೆಳಕನ್ನು ತಡೆಹಿಡಿಯುವುದರಿಂದ ಈ ರೀತಿ ಉಂಗುರ ಕಾಣಿಸುವುದಿಲ್ಲ’ ಎಂದು ಖಗೋಳ ವಿಜ್ಞಾನಿ ಡಾ.ಬಿ.ಎಸ್. ಶೈಲಜಾ ವಿಶ್ಲೇಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.