ADVERTISEMENT

ಮಾರಕಾಸ್ತ್ರಗಳಿಂದ ಹೊಡೆದು ವೃದ್ಧನ ಕೊಲೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 14:23 IST
Last Updated 5 ಫೆಬ್ರುವರಿ 2020, 14:23 IST

ಚಾಮರಾಜನಗರ: ತಾಲ್ಲೂಕಿನ ಹಂಡ್ರಕಳ್ಳಿ ಗ್ರಾಮದಲ್ಲಿ 65 ವರ್ಷದ ವ್ಯಕ್ತಿಯೊಬ್ಬರನ್ನು ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.

ಮಂಗಲ ಗ್ರಾಮದ ಮಹದೇವೇಗೌಡ ಅವರು ಕೊಲೆಯಾದವರು.ಮಂಗಳವಾರ ಸಂಜೆ ಅಥವಾ ರಾತ್ರಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬುಧವಾರ ಬೆಳಿಗ್ಗೆ ಹಂಡ್ರಕಳ್ಳಿ‌ಗ್ರಾಮದ ಸಿದ್ದಯ್ಯ ಎಂಬುವರ ಜಮೀನಿನಲ್ಲಿ‌ಶವ ಪತ್ತೆಯಾಗಿದೆ.

‘ಮಹದೇವೇಗೌಡ ಅವರು ತೊಟ್ಟಿದ್ದ ಪಂಚೆಯನ್ನು ಕುತ್ತಿಗೆಗೆ ಬಿಗಿದು, ಕಲ್ಲು ಅಥವಾ ಮಾರಾಕಾಸ್ತ್ರಗಳಿಂದ ಮುಖಕ್ಕೆ ಹೊಡೆದು ಕೊಲೆ ಮಾಡಲಾಗಿದೆ. ದುಷ್ಕೃತ್ಯ ಎಸಗಿದವರು ಯಾರು ಎಂಬುದು ಗೊತ್ತಾಗಿಲ್ಲ’ ಎಂದು ರಾಮಸಮುದ್ರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸುನಿಲ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಮಹದೇವೇಗೌಡ ಅವರ ಮಗ ಮಹದೇವ ಸ್ವಾಮಿ ಅವರು ಠಾಣೆಗೆ ದೂರು ನೀಡಿದ್ದಾರೆ.ಕೊಲೆಗೆ ಏನು ಕಾರಣ ಎಂಬುದೂ ಗೊತ್ತಾಗಿಲ್ಲ.

ಮಹದೇವೇಗೌಡ ಅವರು ಕುರಿಗಾಹಿಯಾಗಿದ್ದರು. ಮಂಗಳವಾರವೂ ಕುರಿಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ಕುರಿಗಳೆಲ್ಲ ಮನೆಗೆ ಬಂದಿದ್ದರೂ, ಮಹದೇವೇಗೌಡ ಅವರು ಬಂದಿರಲಿಲ್ಲ. ಮನೆಯವರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ. ಬೆಳಗಿನ ಜಾವ ಮತ್ತೆ ಹುಡುಕಾಟ ನಡೆಸಿದಾಗ, ಹಂಡ್ರಕಳ್ಳಿ ಗ್ರಾಮದ ಜಮೀನೊಂದರಲ್ಲಿ ಶವ ಪತ್ತೆಯಾಯಿತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.