ADVERTISEMENT

ಜಿ.ಪಂ. ಅಧ್ಯಕ್ಷೆ ಶಿವಮ್ಮ ಮಾರ್ಚ್ 2ಕ್ಕೆ ರಾಜೀನಾಮೆ: ಧ್ರುವನಾರಾಯಣ

ಶಾಸಕ ನರೇಂದ್ರ ಅವರ ಮನೆಯಲ್ಲಿ ಮಾತುಕತೆ, ಅಶ್ವಿನಿ, ಶಿವಮ್ಮ ನಡುವೆ ಸಂಧಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 15:04 IST
Last Updated 26 ಫೆಬ್ರುವರಿ 2020, 15:04 IST
ಕೆಪಿಸಿಸಿ ವಕ್ತಾರ ಧ್ರುವನಾರಾಯಣ
ಕೆಪಿಸಿಸಿ ವಕ್ತಾರ ಧ್ರುವನಾರಾಯಣ   

ಕೊಳ್ಳೇಗಾಲ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರು ಮಾರ್ಚ್‌ 2ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ ಅವರು ಬುಧವಾರ ಹೇಳಿದರು.

ನಗರದಲ್ಲಿರುವ ಹನೂರು ಶಾಸಕ ಆರ್.ನರೇಂದ್ರ ಅವರ ನಿವಾಸದಲ್ಲಿ ಬುಧವಾರ ಸಭೆ ನಡೆದಿದ್ದು, ಇದರಲ್ಲಿ ಶಿವಮ್ಮ ಹಾಗೂ ಮುಂದೆ ಅಧ್ಯಕ್ಷರಾಗಲಿರುವ ಅಶ್ವನಿ ಅವರು ಭಾಗವಹಿಸಿದ್ದಾರೆ. ನರೇಂದ್ರ ಹಾಗೂ ಧ್ರುವನಾರಾಯಣ ಅವರು ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಿದ್ದಾರೆ.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವನಾರಾಯಣ ಅವರು, ‘ಪಕ್ಷದ ಆಂತರಿಕ ಒಪ್ಪಂದದಂತೆ ಶಿವಮ್ಮ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.ಅವರ ಕ್ಷೇತ್ರವಾದ ಪಾಳ್ಯದ ಮತದಾರರೂ ಅವರನ್ನು ಮನವೊಲಿಸಿದ್ದಾರೆ. ಜನರು ಮತ್ತು ಪಕ್ಷದ ಮುಖಂಡರ ಮಾತಿಗೆ ಬೆಲೆ ಕೊಟ್ಟು ಅವರು ರಾಜೀನಾಮೆಗೆ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ADVERTISEMENT

ಶಾಸಕ ಆರ್.ನರೇಂದ್ರ ಅವರು ಮಾತನಾಡಿ, ‘ಮೂರು ತಿಂಗಳ ಹಿಂದೆಯೇ ಶಿವಮ್ಮ ಅವರು ರಾಜೀನಾಮೆ ನೀಡಬೇಕಿತ್ತು. ಆದರೆ ಕೆಲವು ಸಣ್ಣ ಪುಟ್ಟ ವಿಚಾರಗಳಿಗೆ ನೀಡಿರಲಿಲ್ಲ ಮತ್ತು ಅವರ 6 ತಿಂಗಳ ಗೌರವ ಧನವೂ ಬಂದಿರಲಿಲ್ಲ. ಈಗ ಅವರ ಖಾತೆಗೆ ಗೌರವ ಧನ ಬಂದಿದೆ. ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಕೆಪಿಸಿಸಿ ವಕ್ತಾರ ಆರ್.ಧ್ರುವನಾರಾಯಣ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಅವರಿಗೆ ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದೇವೆ. ಸದಸ್ಯೆ ಅಶ್ವಿನಿ ಮತ್ತು ಶಿವಮ್ಮ ಅವರ ನಡುವೆ ಸಂಧಾನವನ್ನೂ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರು ಪಕ್ಷವನ್ನು ಇನ್ನಷ್ಟು ಬಲಪಡಿಸಿ ಉತ್ತಮ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.