ಗುಂಡ್ಲುಪೇಟೆ: ಅನೀಮಿಯಾ (ಕುಡುಗೋಲು) ಸಮಸ್ಯೆ ಬುಡಕಟ್ಟು ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತಿದ್ದು, ನಿವಾರಣೆಗೆ ಪೌಷ್ಟಿಕಾಂಶಯುಕ್ತ ಮಾತ್ರೆ ಸೇವನೆ ಮಾಡಬೇಕು ಎಂದು ಮೈಸೂರು ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಅನುವಂಶೀಯ ರೋಗ ತಜ್ಞೆ ಡಾ.ದೀಪಾ ಭಟ್ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾಯಿ ಗಿರಿಜನ ಪ್ರಗತಿ ಫೌಂಡೇಷನ್ ಹಾಗೂ ಮಾನವ ಬಂಧುತ್ವ ವೇದಿಕೆ ಸೇರಿದಂತೆ ಸಂಘಟನೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ರಾಷ್ಟ್ರೀಯ ಸಿಕೆಲ್ ಸೆಲ್ (ಕುಡುಗೋಲು) ಅನೀಮಿಯಾ ನಿರ್ಮೂಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅನೀಮಿಯಾ ಸಮಸ್ಯೆಗೆ ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ತುತ್ತಾಗುತ್ತಾರೆ. ರಕ್ತದಲ್ಲಿ 10 ಗ್ರಾಂಗಿಂತ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದ ಸಂದರ್ಭದಲ್ಲಿ ಈ ರೀತಿಯ ಸಮಸ್ಯೆ ತಲೆದೋರಿ ಅನೇಕ ದುಷ್ಪರಿಣಾಮ ಬೀರಬಹುದು. ಅನುವಂಶೀಯ ಪರಿಣಾಮಗಳಿಂದ ಸಹ ಬರಬಹುದು. ರಕ್ತ ಸಂಬಂಧದಲ್ಲಿ ಮದುವೆಯಾದಲ್ಲಿ ಈ ಕಾಯಿಲೆ ಬರುವ ಸಾಧ್ಯತೆ ಇದೆ. ಸರ್ಕಾರ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಪೌಷ್ಟಿಕಾಂಶ ಯುಕ್ತ ಮಾತ್ರೆ ವಿತರಣೆ ಮಾಡಿ ರೋಗ ನಿರ್ಮೂಲನೆಗೆ ಮುಂದಾಗಿದೆ ಎಂದರು.
ಶ್ರೀಸಾಯಿ ಗಿರಿಜನ ಪ್ರಗತಿ ಫೌಂಡೇಷನ್ ಅಧ್ಯಕ್ಷರಾದ ರತ್ನಮ್ಮ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಗಿರಿಜನ ಹಾಡಿಗಳು ಹೆಚ್ಚಿವೆ. ಜೊತೆಗೆ ಅದಿವಾಸಿಗಳಲ್ಲಿ ಅರಿವಿನ ಕೊರತೆ ಇದೆ. ಬಡತನ ಸಮಸ್ಯೆಯಿಂದ ಬಹುತೇಕ ಎಲ್ಲರಲ್ಲಿಯೂ ಅನೀಮಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆಲೀಂ ಪಾಷಾ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಮಾತನಾಡಿದರು.
ತಹಶೀಲ್ದಾರ್ ಟಿ.ರಮೇಶ್ ಬಾಬು, ಬುಡಕಟ್ಟು ಸಂಶೋಧನಾ ಸಂಸ್ಥೆಯ ಅಧಿಕಾರಿ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಕುವೆಂಪು ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಬ್ರಹ್ಮಾನಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರುದ್ರವ್ವ, ಮದ್ದೂರು ಮಾದು, ಕರ್ನಾಟಕ ಗಡಿನಾಡು ವನ್ಯಜೀವಿ ಸಂರಕ್ಷಣಾ ಸಂಘದ ಅಧ್ಯಕ್ಷ ಪಿ.ಬಾಲು, ಕಾವಲು ಪಡೆಯ ಸಾಧಿಕ್ ಪಾಷಾ, ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.