ಚಾಮರಾಜನಗರ: ವಿಧಾನ ಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯ ಪ್ರಚಾರ ಕಾರ್ಯವನ್ನು ಬಿಜೆಪಿ ಜಿಲ್ಲೆಯಲ್ಲಿ ಚುರುಕುಗೊಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಚಾಮರಾಜನಗರ, ಗುಂಡ್ಲುಪೇಟೆ ತಾಲ್ಲೂಕಿನ ವಿವಿಧೆಡೆ ಭಾನುವಾರ ಪಕ್ಷದ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರವಾಗಿ ಮತಯಾಚನೆ ನಡೆಯಿತು.
ತಾಲ್ಲೂಕಿನ ಚಂದಕವಾಡಿ, ಕೊತ್ತಲವಾಡಿ, ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹಾಗೂ ಗುಂಡ್ಲುಪೇಟೆಗಳಲ್ಲಿ ಬಿಜೆಪಿಯು ಮತದಾರರ ಚಿಂತನಾ ಸಭೆಗಳನ್ನು ಭಾನುವಾರ ಹಮ್ಮಿಕೊಂಡಿತ್ತು. ಸೋಮವಾರ ಹನೂರು, ಕೊಳ್ಳೇಗಾಲ, ಯಳಂದೂರು ತಾಲ್ಲೂಕಿನಲ್ಲಿ ಸಭೆ ನಡೆಯಲಿವೆ.
ಚಂದಕವಾಡಿಯಲ್ಲಿ ನಡೆದ ಚಿಂತನಾಸಭೆ ಉದ್ಘಾಟಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ‘ಬದಲಾವಣೆಯ ಗಾಳಿ ಇಡೀ ಜಗತ್ತಿನಲ್ಲಿ ಆಗಿದೆ. ಅದು ರಾಜ್ಯ, ಚಾಮರಾಜನಗರ ಜಿಲ್ಲೆಯಲ್ಲೂ ಆಗಬೇಕು. ಇಲ್ಲಿ ನಮ್ಮ ಪಕ್ಷ ಗೆಲ್ಲುತ್ತಿಲ್ಲ. ಈ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರನ್ನು ಗೆಲ್ಲಿಸಿ ಜಿಲ್ಲೆಯಲ್ಲಿ ಬದಲಾವಣೆ ಪರ್ವ ಆರಂಭವಾಗಬೇಕು’ ಎಂದರು.
‘ಚಾಮರಾಜನಗರ ಕ್ಷೇತ್ರದಲ್ಲಿ 42 ಗ್ರಾಮ ಪಂಚಾಯಿತಿಗಳಿದ್ದು, 14 ಸಾವಿರ ಪದವೀಧರ ಮತದಾರರ ನೋಂದಣಿ ಮಾಡಲಾಗಿದೆ. ಈ ಚುನಾವಣೆಯಲ್ಲಿ ಚಿಹ್ನೆ ಇಲ್ಲ. ಮೈ.ವಿ.ರವಿಶಂಕರ್ ಭಗೀರಥ ಮಹರ್ಷಿ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಗೆಲ್ಲಿಸಬೇಕು’ ಎಂದು ಹೇಳಿದರು.
ಮೈ.ವಿ.ರವಿಶಂಕರ್ ಮಾತನಾಡಿ ‘ನನ್ನನ್ನು ಗೆಲ್ಲಿಸಿದರೆ ಆರು ವರ್ಷ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್, ಪ್ರಧಾನ ಕಾರ್ಯದರ್ಶಿ ನಾಗಶ್ರೀ, ಉಪಾಧ್ಯಕ್ಷ ಪಿ.ವೃಷಬೇಂದ್ರಪ್ಪ,ಮುಖಂಡರಾದ ಕೆ.ಆರ್.ಮಲ್ಲಿಕಾರ್ಜನಪ್ಪ, ನಿಜಗುಣರಾಜು, ಎ.ಎಸ್.ನಟರಾಜು, ಡಾ.ಎ.ಆರ್.ಬಾಬು, ಅಯ್ಯನಪುರ ಶಿವಕುಮಾರ್, ಎ.ಆರ್.ಬಾಲರಾಜ್, ಬಿಜೆಪಿ ಜಿಲ್ಲಾ ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ಪ್ರಧಾನ ಕಾರ್ಯದರ್ಶಿ ನಲ್ಲೂರು ಶ್ರೀನಾಥ್, ಕೆ.ವೀರಭದ್ರಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.