ಸಂತೇಮರಹಳ್ಳಿ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾವಿಟಿ ಸೈನ್ಸ್ ಪೌಂಡೇಶನ್ ಸಂಸ್ಥೆ ವತಿಯಿಂದ ಚಂದ್ರಯಾನ-3 ಮಿಷನ್ ವಿಕ್ರಮ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಿದ್ದ ಯಶಸ್ಸಿನ ಸ್ಮರಣಾರ್ಥ ಮೊದಲ ವರ್ಷದ ರಾಷ್ಟ್ರೀಯ ಬಾಹ್ಯಕಾಶ ದಿನಾಚರಣೆಯನ್ನು ಈಚೆಗೆ ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎ.ಎಸ್.ಅಭಿಷೇಕ್ ಮಾತನಾಡಿ, ಭಾರತ ಬಾಹ್ಯಕಾಶ ಸಂಶೋಧನಾ ಕ್ಷೇತ್ರದಲ್ಲಿ ಡಾ.ವಿಕ್ರಂ ಸಾರಾಭಾಯಿ ಅವರ ದೂರದೃಷ್ಟಿಯ ಫಲವಾಗಿ ಸ್ಥಾಪನೆಗೊಂಡ ಇಸ್ರೊ ಸಂಸ್ಥೆಯು ಇಂದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸಾಧನೆಯನ್ನು ಮಾಡಿದೆ.
ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ನಾಲ್ಕನೇ ದೇಶ ಭಾರತ ಹಾಗೂ ಚಂದ್ರನ ಧಕ್ಷಿಣ ಧ್ರುವದಲ್ಲಿ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆ ಗಳಿಸಿದೆ. ಭವಿಷ್ಯದಲ್ಲಿ ಗಗನಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸುವ ಬಾಹ್ಯಕಾಶ ನಿಲ್ದಾಣವನ್ನು ಸ್ಥಾಪಿಸುವ ಹಾಗೂ ಮಾನವನನ್ನು ಚಂದ್ರನ ಮೇಲೆ ಕಳಿಹಿಸುವ ಮಹತ್ತರ ಯೋಜನೆಗಳನ್ನು ಇಸ್ರೊ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾದ ಬಿ.ಮಹೇಶ್ ಕುಮಾರ್, ಸೋಮರಾಜು, ನವೀನ್, ಉಪಪ್ರಾಂಶುಪಾಲ ಪುಷ್ಬರಾಜ್, ಶಿಕ್ಷಕರಾದ ಮಹದೇವಸ್ವಾಮಿ, ನಾಗೇಶ್, ಶಾಂತಮೂರ್ತಿ, ಮಂಜುನಾಥ್ ಸ್ವಾಮಿ, ಲಕ್ಷ್ಮಿ, ಮಹೇಶ್ವರಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.