ADVERTISEMENT

ದಸರಾ ಕ್ರೀಡಾಕೂಟದಿಂದ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ:ಪುಟ್ಟರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 15:47 IST
Last Updated 18 ಆಗಸ್ಟ್ 2022, 15:47 IST
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಗುಂಡು ಎಸೆಯುವುದರ ಮೂಲಕ ಚಾಮರಾಜನಗರ ತಾಲ್ಲೂಕು ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷ ಆಶಾ ಇತರರು ಇದ್ದರು
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಗುಂಡು ಎಸೆಯುವುದರ ಮೂಲಕ ಚಾಮರಾಜನಗರ ತಾಲ್ಲೂಕು ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷ ಆಶಾ ಇತರರು ಇದ್ದರು   

ಚಾಮರಾಜನಗರ: ದಸರಾ ಕ್ರೀಡಾಕೂಟಗಳು, ಗ್ರಾಮೀಣ ಕ್ರೀಡಾ ಸಾಧಕರನ್ನು ಬೆಳಕಿಗೆ ತರಲು ಸಹಕಾರಿಯಾಗುತ್ತವೆ. ಕ್ರೀಡಾಪಟುಗಳು ಸೋಲು ಗೆಲುವಿನ ಬಗ್ಗೆ ಚಿಂತಿಸದೆ ಉತ್ತಮ ಸಾಧನೆ ಮಾಡಲು ಗಮನಹರಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ 2022–23ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲೂ ದಸರಾ ಆಚರಿಸಲು ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ₹1 ಕೋಟಿ ಅನುದಾನ ನೀಡಿದ್ದರು. ಆ ಬಳಿಕ ಸರ್ಕಾರ ಪ್ರತಿ ವರ್ಷ ಅನುದಾನ ಕೊಡುತ್ತಾ ಬಂದಿದೆ. ಎರಡು ವರ್ಷ ಕೋವಿಡ್‌ ಕಾರಣಕ್ಕೆ ದಸರಾ ಆಚರಿಸಲಿಲ್ಲ. ಸರ್ಕಾರ ಈ ಬಾರಿ ₹1 ಕೋಟಿ ಅನುದಾನ ನೀಡಿದ್ದು, ಅದ್ದೂರಿಯಾಗಿ ಜಿಲ್ಲಾ ದಸರಾ ನಡೆಯಲಿದೆ’ ಎಂದರು.

ADVERTISEMENT

‘ಕ್ರೀಡಾಪಟುಗಳು ತಾಲ್ಲೂಕು ಮಟ್ಟದಲ್ಲಿ ಜಯಿಸಿ ಮುಂದೆ ನಡೆಯುವ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗೆದ್ದು ಜಿಲ್ಲೆಗೆ ಕೀರ್ತಿ ತರಬೇಕು. ಆಟಗಾರರು ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಆಶಾ ಮಾತನಾಡಿ, ‘ಕ್ರೀಡೆ ದೈಹಿಕ ಹಾಗೂ ಮಾನಸಿಕ ವೃದ್ಧಿಗೆ ಸಹಾಯಕಾರಿಯಾಗಿದೆ. ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕಾರ ಮಾಡಬೇಕು. ಸೋತವರಿಗೆ ಇದೇ ಕೊನೆಯ ಪಂದ್ಯವಾಗಿರುವುದಿಲ್ಲ’ ಎಂದರು.

ನಗರಸಭೆ ಉಪಾಧ್ಯಕ್ಷೆ ಪಿ.ಸುಧಾ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಆರ್. ಅನಿತಾ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.