ಗುಂಡ್ಲುಪೇಟೆ: ತಾಲ್ಲೂಕಿನ ಕೇರಳ ರಸ್ತೆ ಮಲ್ಲಯ್ಯನಪುರ ಗೇಟ್ ಸಮೀಪ ಶುಕ್ರವಾರ ತರಕಾರಿ ತುಂಬಿದ ವಾಹನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ರಸ್ತೆಯ ತುಂಬಾ ತರಕಾರಿ ಚೆಲ್ಲಾಪಿಲ್ಲಿಯಾದವು.
ಇಲ್ಲಿನ ಎಪಿಎಂಸಿ ಮಾರುಕಟ್ಟೆಯಿಂದ ಕೇರಳಕ್ಕೆ ಸಾಗಣೆ ಮಾಡುತ್ತಿದ್ದ ವೇಳೆ ಪಿಕ್ ಅಪ್ ವಾಹನ ಹೆದ್ದಾರಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಘಟನೆಯಲ್ಲಿ ವಾಹನ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ತರಕಾರಿ ಸಂಪೂರ್ಣ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಕೂಡಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಗುಂಡ್ಲುಪೇಟೆ ಠಾಣೆ ಪೊಲೀಸರು ವಾಹನ ಹಾಗೂ ತರಕಾರಿ ತೆರವು ಗೊಳಿಸಿದರು. ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಹಂಪ್ ನಿರ್ಮಾಣಕ್ಕೆ ಒತ್ತಾಯ:
ಗುಂಡ್ಲುಪೇಟೆ-ಕೇರಳ ಹೆದ್ದಾರಿ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆಯಲ್ಲಿ ಹಂಪ್ ಇಲ್ಲದ ಕಾರಣ ಬೈಕ್ ಹಾಗೂ ಕಾರುಗಳು ಅತೀವೇಗದಿಂದ ತೆರಳುತ್ತವೆ. ಸಂಜೆ 7 ಗಂಟೆ ನಂತರ ವಾಹನಗಳು ವೇಗ ಹೆಚ್ಚಿಸುತ್ತವೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಜೊತೆಗೆ ಶಾಲಾ-ಕಾಲೇಜು ಸಮಯ ವಿದ್ಯಾರ್ಥಿಗಳು ರಸ್ತೆ ದಾಟುವುದೇ ದುಸ್ತರವಾಗಿದೆ. ಆದ್ದರಿಂದ ಹಂಪ್ ನಿರ್ಮಿಸಿ, ಅನಾಹುತ ತಪ್ಪಿಸಿ ಎಂದು ಮಲ್ಲಯ್ಯನಪುರ ಹಾಗೂ ಕೂತನೂರು ಗ್ರಾಮಸ್ಥರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.