ADVERTISEMENT

ರಸ್ತೆ ಗುಂಡಿ ಮುಚ್ಚಿದ ಗ್ರಾಮಸ್ಥರು

ಕಂಡು ಕಾಣದಂತೆ ಇದ್ದ ಅಧಿಕಾರಿಗಳು: ಆರೋಪ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 7:31 IST
Last Updated 18 ಅಕ್ಟೋಬರ್ 2020, 7:31 IST
ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳನ್ನು ಗ್ರಾಮಸ್ಥರೇ ಮಣ್ಣು ಹಾಕಿ ಮುಚ್ಚಿದರು
ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳನ್ನು ಗ್ರಾಮಸ್ಥರೇ ಮಣ್ಣು ಹಾಕಿ ಮುಚ್ಚಿದರು   

ಹನೂರು: ಗ್ರಾಮದ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಮಾರ್ಟಳ್ಳಿ ಗ್ರಾಮಸ್ಥರು ತಾವೇ ಮಣ್ಣು ಹಾಕಿ ಮುಚ್ಚುವ ಮೂಲಕ ರಸ್ತೆಯನ್ನು ಸರಿಪಡಿಸಿದ್ದಾರೆ.

ಗ್ರಾಮದ ಮುಖ್ಯ ರಸ್ತೆಯಲ್ಲಿ ಬಿದ್ದ ಗುಂಡಿಗಳಿಂದಾಗಿ ಮಕ್ಕಳು ವೃದ್ಧರು ಓಡಾಡುವುದೇ ದುಸ್ತರವಾಗಿತ್ತು. ಮಳೆ ಬಂದಾಗಲಂತೂ ರಸ್ತೆಯಲ್ಲೇ ನಿಲ್ಲುತ್ತಿದ್ದ ನೀರಿನಿಂದಾಗಿ ವಾಹನ ಸವಾರರು ಗುಂಡಿ ಆಳ ತಿಳಿಯದೇ ಸಾಕಷ್ಟು ಬಾರಿ ಬಿದ್ದು ಗಾಯಗೊಂಡಿದ್ದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ ಆದ್ದರಿಂದ ಗ್ರಾಮಸ್ಥರೇ ಮುಂದಾಗಿ ಗುಂಡಿ ಮುಚ್ಚಿದರು.

‘ಇದೇ 24ರಿಂದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ತೆರೆಯುತ್ತಿದೆ. ದೇವಸ್ಥಾನಕ್ಕೆ ಬರುವವರ ಈ ರಸ್ತೆಯಲ್ಲೇ ಸಂಚರಿಸುತ್ತಾರೆ. ಮುಂದಾದರೂ ಅಧಿಕಾರಿಗಳು ಶಾಶ್ವತವಾಗಿ ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿಪಡಿಸಿ ಮುಂದಾಗುವ ಅನಾಹುತಗಳನ್ನು ತಡೆಗಟ್ಟಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

‘ಮನವಿ ಸಲ್ಲಿಸಿ ಬೇಸತ್ತು ಕೊನೆಗೆ ನಾವೇ ಅಂಗಡಿ ಮಾಲೀಕರು ಹಾಗೂ ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಟ್ರಾಕ್ಟರ್ ಮೂಲಕ ಮಣ್ಣು ತಂದು ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದೇವೆ. ಈ ಕೆಲಸವನ್ನು ನಾವೇ ಮಾಡಿಸಿದ್ದೇವೆಂದು ಕ್ರಿಯಾ ಯೋಜನೆ ರೂಪಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದಕ್ಕೂ ಹಣ ಬಿಡುಗಡೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕು’ ಎಂದು ಗ್ರಾಮದ ಕರ್ನಲ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.