ಹನೂರು: ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ಸ್ಮಶಾನದ ಮುಂದೆ ಮಹಿಳೆಯೊಬ್ಬರು ಕೋವಿಡ್ನಿಂದ ಮೃತಪಟ್ಟ ತನ್ನ ಪತಿಯ ಶವದ ಪಕ್ಕ ಅಂತ್ಯ ಸಂಸ್ಕಾರ ಮಾಡುವವರಿಲ್ಲದೇ ಏಕಾಂಗಿಯಾಗಿ ಕುಳಿತು ರೋದಿಸುತ್ತಿರುವ ಚಿತ್ರವೊಂದು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದೆ.
ಇಲ್ಲಿಗೆ ಸಮೀಪದ ಸಂದನಪಾಳ್ಯ ಗ್ರಾಮದ ಮದಲೈಮುತ್ತು ಎಂಬುವವರು ಕೂಲಿ ಕೆಲಸಕ್ಕಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಲಾಕ್ಡೌನ್ನಿಂದ ವಾರದ ಹಿಂದೆ ಗ್ರಾಮಕ್ಕೆ ಮರಳಿದ್ದರು. ಬಳಿಕ ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಪಟ್ಟಿತ್ತು. ನಂತರ ಕೊಳ್ಳೆಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಇವರು ಮೇ 17ರಂದು ಮೃತಪಟ್ಟಿದ್ದರು. ಬಳಿಕ ಖಾಸಗಿ ಆಂಬ್ಯೂಲೆನ್ಸ್ನಲ್ಲಿ ಶವವನ್ನು ತಂದು ಸ್ಮಶಾನದ ಮುಂದೆ ಬಿಟ್ಟು ಹೋಗಿದ್ದಾರೆ. ಅಂತ್ಯ ಸಂಸ್ಕಾರ ಮಾಡುವವರಿಲ್ಲದೇ ಪತ್ನಿ ಶವದ ಮುಂದೆ ಗೋಳಾಡುತ್ತಿರುವ ಚಿತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಮರಣ ವಿಭಾಗದ ನೋಡೆಲ್ ಅಧಿಕಾರಿ ಶಿವಲಿಂಗು, 17 ರಂದು ಸಂದನಪಾಳ್ಯ ಗ್ರಾಮದ ಯಾವುದೇ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ದಾಖಲೆ ಇಲ್ಲ ಎಂದು ತಿಳಿಸಿದರು.
ಗ್ರಾಮಸ್ಥರಾದ ಅಪ್ಪು ಅವರು ಪ್ರತಿಕ್ರಿಯಿಸಿ, ‘ಕಾಮಗೆರೆಯಿಂದ ಬಂದ ತಂಡವೊಂದು ಕೋವಿಡ್ ನಿಯಮಾನುಸಾರ ಅಂತ್ಯ ಸಂಸ್ಕಾರ ನೆರವೇರಿಸಿದೆ’ ಎಂದು ಹೇಳಿದರು.
ಮೃತರ ಸಂಬಂಧಿಕರು ಸಂಪರ್ಕಕ್ಕೆ ಸಿಕ್ಕಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.