ಚಾಮರಾಜನಗರ: ಭಾರತದ ಶ್ರೇಷ್ಠ ಸಂಸ್ಕೃತಿ, ಪರಂಪರೆಯನ್ನು ಇಡೀ ವಿಶ್ವಕ್ಕೆ ಅನಾವರಣಗೊಳಿಸಿದ ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಪರಿಕಲ್ಪನೆಯ ಅದರ್ಶ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಉಪನ್ಯಾಸಕ ಸುರೇಶ್ ಎನ್.ಋಗ್ವೇದಿ ಶುಕ್ರವಾರ ತಿಳಿಸಿದರು.
ನಗರದ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಬಿಇಡಿ ಕಾಲೇಜಿನಲ್ಲಿ ಕೇಂದ್ರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಗೂ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಾಷ್ಟ್ರದ ಯುವಜನತೆಗೆ ಮಾದರಿ ಶಕ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ದೇಶದ್ಯಾಂತ ಆಚರಿಸಲಾಗುತ್ತಿದೆ. ಇಡೀ ಯುವಶಕ್ತಿ ಸಂಭ್ರಮಿಸುವ ದಿನ ಇದಾಗಿದೆ. ದೇಶದ ಅಭಿವೃದ್ಧಿಗಾಗಿ ಯುವಶಕ್ತಿಯ ಸೇವಾ ಮನೋಭಾವ, ಗುಣ ಶ್ರೇಷ್ಠತೆ, ತ್ಯಾಗ, ಏಕಾಗ್ರತೆ ಹೇಗಿರಬೇಕು ಎಂದು ತಮ್ಮ ಸಂದೇಶಗಳ ಮೂಲಕ ಸಾರಿದ ವಿವೇಕಾನಂದರು ಯುವಕರನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆಸಿದರು’ ಎಂದರು.
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ ಮಾತನಾಡಿ, ‘ಸ್ವಾಮಿ ವಿವೇಕಾನಂದರು ದೇಶದ ಆಧುನಿಕ ಚಿಂತಕ, ತತ್ವಜ್ಞಾನಿ, ದಾರ್ಶನಿಕ. ಯುವಜನರಲ್ಲಿದ್ದ ಸಾಮಾಜಿಕ ಮೌಢ್ಯವನ್ನು ತೊಡೆಯಲು ಸತ್ಯಶೋಧನೆ ಮೂಲಕ ದೇಶದ ಪ್ರಗತಿ ಪೂರಕವಾಗಿ ಕೊಡುಗೆ ನೀಡಿದ್ದಾರೆ’ ಎಂದರು.
ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಸಿ.ಬಸವಣ್ಣ ಮಾತನಾಡಿ, ‘ಜಗತ್ತಿನ ಅತಿದೊಡ್ಡ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಅಪ್ರತಿಮ ದೇಶಭಕ್ತ, ಧಾರ್ಮಿಕ, ವೈಜ್ಞಾನಿಕ ಚಿಂತಕ, ಸಮಾಜ ಸುಧಾರಕರು ಹೌದು. ಇಡೀ ವಿಶ್ವಕ್ಕೆ ಭಾರತ ದರ್ಶನ ಮಾಡಿಸಿದ ವಿವೇಕಾನಂದರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದರು.
ಜಿ.ಬಂಗಾರು ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಮಹದೇವಪ್ರಸಾದ್ ಮಾತನಾಡಿದರು. ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಗ್ರಂಥಾಲಯದ ಶಿವಶಂಕರರಾಜೇ ಅರಸ್ ಅವರು ಏಡ್ಸ್ ನಿಯಂತ್ರಣದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಬಿಇಡಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.