ಬಾಗೇಪಲ್ಲಿ: ತಾಲ್ಲೂಕಿನ ಪರಗೋಡು ಚಿತ್ರಾವತಿ ಬ್ಯಾರೇಜಿನಲ್ಲಿ ಹೂಳು ತೆಗೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಮತ್ತೆ ಕೆಲಸ ಆರಂಭಿಸುವಂತೆ ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳು ಅ. 8ರಿಂದ ಮತ್ತೆ ಹೋರಾಟ ಆರಂಭಿಸಲು ನಿರ್ಧರಿಸಿವೆ.
ಅನಿರ್ದಿಷ್ಟಾವಧಿ ಧರಣಿ ನಡೆಸುವುದರ ಜೊತೆಗೆ ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕು ಬಂದ್, ಕಚೇರಿಗಳಿಗೆ ಮುತ್ತಿಗೆ, ಹೆದ್ದಾರಿ ತಡೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಸಂಘ ಸಂಸ್ಥೆಗಳ ಪೂರ್ವಭಾವಿ ಸಭೆಯಲ್ಲಿ ಚಿತ್ರಾವತಿ ಹೋರಾಟ ಸಮಿತಿ ಅಧ್ಯಕ್ಷ ಮಹಮ್ಮದ್ ಅಕ್ರಂ ಮಾತನಾಡಿ `ಸಚಿವರು, ಅಧಿಕಾರಿಗಳು ಭರವಸೆ ನೀಡುವುದರ ಮೂಲಕ ಹೋರಾಟದ ದಿಕ್ಕು ಬದಲಿಸುತ್ತಿದ್ದಾರೆ. ಚಿತ್ರಾವತಿ ಹೂಳು ತೆಗೆಯುವವರೆಗೆ ಹೋರಾಟ ಮುಂದುರೆಸಬೇಕು. ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಹಿನ್ನೆಲೆಯಲ್ಲಿ ಅ. 8ರಂದು ಮತ್ತೆ ಹೋರಾಟ ಆರಂಭಿಸಕಾಗಿದೆ~ ಎಂದರು.
`ಚಿತ್ರಾವತಿ ಹೋರಾಟ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದರ ಮೂಲಕ ಹೊಸ ರೂಪ ನೀಡಲಾಗುವುದು ಎಂದು ಹೇಳಿದರು.
ವಕೀಲರ ಸಂಘ ಕಾರ್ಯಾಧ್ಯಕ್ಷ ಸುಬ್ಬಿರೆಡ್ಡಿ ಮಾತನಾಡಿ `ಚಿತ್ರಾವತಿ ಬ್ಯಾರೇಜು ನಿರ್ಮಾಣದ ಹಂತದಲ್ಲಿ ಹೂಳು ತೆಗೆಸದ ಗುತ್ತಿಗೆದಾರ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಮಂಡಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಬೇಕು~ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ, ನಿವೃತ್ತ ಯೋಧರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೌಡಪ್ಪ, ಡಿವೈಎಫ್ಐ ತಾಲ್ಲೂಕು ಘಟಕದ ಕಾರ್ಯದರ್ಶಿ ಮಂಜುನಾಥರೆಡ್ಡಿ, ಕನ್ನಡ ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ಬಾಬಾಜಾನ್ ಮಾತನಾಡಿದರು.
ಸಮಿತಿ ಮುಖಂಡ ಗೋರ್ವಧನಾಚಾರಿ, ವೆಂಕಟೇಶ್ಬಾಬು, ಕಂಚುಕೋಟೆಮೂರ್ತಿ, ಡಿವೈಎಫ್ಐ ಮುಖಂಡ ರಘುರಾಮರೆಡ್ಡಿ, ರೈತ ಸಂಘ ಮುಖಂಡ ರಘುನಾಥರೆಡ್ಡಿ, ಮಾಜಿ ಯೋಧರ ಸಂಘದ ಜಿಲ್ಲಾಕಾರ್ಯದರ್ಶಿ ಅಮರನಾಥಬಾಬು, ಚಿತ್ರಾವತಿ ಟೆಂಪೋ ಮಾಲೀಕ ಹಾಗೂ ಚಾಲಕರ ಸಂಘ ಕಾರ್ಯದರ್ಶಿ ಆಂಜನೇಯರೆಡ್ಡಿ, ಜಯಕರ್ನಾಟಕ ತಾಲ್ಲೂಕು ಅಧ್ಯಕ್ಷ ಗೋವಿಂದ, ಕನ್ನಡ ಸೇನೆ-ಕರ್ನಾಟಕ ತಾಲ್ಲೂಕು ಕಾರ್ಯದರ್ಶಿ ವೆಂಕಟೇಶ್, ದ್ವಿಚಕ್ರ ವಾಹನ ಮೆಕಾನಿಕ್ ಸಂಘ, ಹಾಲು ಉತ್ಪಾದಕರ ಸಂಘ ಮುಖಂಡ ನಾಗರಾಜು, ಹಮಾಲಿ ಕ್ಷೇಮಾಭಿವೃದ್ದಿ ಸಂಘ, ಆಟೋ ಸಂಘ ಭಾಗವಹಿಸಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.