ADVERTISEMENT

ಆಧುನೀಕತೆ ಪ್ರಭಾವ: ಸಹಕಾರಿ ಮನೋಭಾವ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:30 IST
Last Updated 1 ಅಕ್ಟೋಬರ್ 2012, 6:30 IST

ಚಿಂತಾಮಣಿ: ಸಮಾಜ ಆಧುನಿಕ ರೀತಿಯಲ್ಲಿ ಮುಂದುವರಿದಂತೆ ಸಹಕಾರಿ ತತ್ವ ಮತ್ತು ಮನೋಭಾವ ಕಣ್ಮರೆಯಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ನೌಕರರ ಗೃಹನಿರ್ಮಾಣ ಸಹಕಾರ ಸಂಘದ 2011-12ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಭಾನುವಾರ ಉದ್ಘಾಟಿಸಿ, ಅವರು ಮಾತನಾಡಿದರು.

ರಾಜ್ಯದಲ್ಲಿ ಸಹಕಾರಿ ಸಂಘಗಳು ಕ್ರಾಂತಿಯನ್ನು ಮಾಡಿದ್ದವು. ವೈಯುಕ್ತಿಕ ಭಿನ್ನಾಭಿಪ್ರಾಯ, ರಾಜಕೀಯ ಹಸ್ತಕ್ಷೇಪದಿಂದ ಇತ್ತೀಚೆಗೆ ಸಹಕಾರಿ ಸಂಸ್ಥೆಗಳು ನಾಶವಾಗುತ್ತಿವೆ. ಗೃಹನಿರ್ಮಾಣ ಸಹಕಾರ ಸಂಘದ ಸದಸ್ಯರು ಮತ್ತು ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ನಗರ ವೇಗವಾಗಿ ಬೆಳೆಯುತ್ತಿದೆ. ನೌಕರರು ಸ್ವಂತ ನಿವೇಶನ ಪಡೆಯಲು, ಮನೆ ನಿರ್ಮಿಸಲು ತೊಂದರೆಯಾಗುತ್ತಿದೆ. ಸಂಘವು ನೌಕರರಿಗೆ ಕಡಿಮೆ ಬೆಲೆಗೆ ನಿವೇಶನಗಳನ್ನು ವಿತರಿಸುವ ಮೂಲಕ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾರಾಯಣರೆಡ್ಡಿ, ಗುರಿಯನ್ನು ಮುಟ್ಟಲು ಒಗ್ಗೂಡಿ ಕೆಲಸ ಮಾಡಬೇಕು. ಈಗಾಗಲೇ ವಿತರಣೆ ಮಾಡಿರುವ ಹಾಗೂ ಮುಂದೆ ವಿತರಿಸುವ ನಿವೇಶನಗಳ ಬಗ್ಗೆ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ವಸಂತರೆಡ್ಡಿ, ಸಂಘದಲ್ಲಿ ಬಹುತೇಕ ಶಿಕ್ಷಕರೇ ಸದಸ್ಯರಾಗಿದ್ದಾರೆ. ಅಡಳಿಮಂಡಳಿ ಕಾರ್ಯಕಾರಿ ಸಮಿತಿಗೂ ಎಲ್ಲ ಶಿಕ್ಷಕರೇ ಆಯ್ಕೆಯಾಗಿದ್ದು, ನಿವೇಶನಗಳನ್ನು ಒದಗಿಸಲು ಇನ್ನೂ ವೇಗವಾಗಿ ಕಾರ್ಯಕ್ರಮ ಕೈಗೊಳ್ಳುವಂತೆ  ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಕೆ.ಸಿ.ಶಿವಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದುವರೆಗೆ ಸಂಘವು 96 ಎಕರೆ ಜಮೀನು ಖರೀದಿ ಮಾಡಿ, 2112 ಸದಸ್ಯರಿಗೆ ನಿವೇಶನ ವಿತರಿಸಿದೆ. ಸಂಘದಲ್ಲಿ 5719 ಸದಸ್ಯರಿದ್ದು, ಉಳಿದವರಿಗೂ ನಿವೇಶನ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕನಂಪಲ್ಲಿ ಬಳಿ 3 ಎಕರೆ ಜಮೀನಿನಲ್ಲಿ ಸುಮಾರು 60 ನಿವೇಶನ ರೂಪಿಸಿದ್ದು, ಅದು ವಿತರಣೆ ಹಂತದಲ್ಲಿದೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್ ಮಾತನಾಡಿದರು. ಸಂಘದ ಉಪಾಧ್ಯಕ್ಷ ಲಕ್ಷ್ಮಣರೆಡ್ಡಿ, ಮುಖಂಡರಾದ ಮಂಜುನಾಥರೆಡ್ಡಿ, ನಾಗರಾಜ್, ಆಂಜನೇಯರೆಡ್ಡಿ, ಚೆನ್ನಬಸವಶೆಟ್ಟಿ, ಶ್ರಿನಿವಾಸರೆಡ್ಡಿ, ರಮೇಶ್, ಕೃಷಿ ಇಲಾಖೆ ಶ್ರಿನಿವಾಸ್ ಮತ್ತಿತರರು ಭಾಗವಹಿಸಿದ್ದರು.

ಗಂಗುಲಪ್ಪ ಸ್ವಾಗತಿಸಿದರು, ಪ್ರಕಾಶರೆಡ್ಡಿ ನಿರೂಪಿಸಿದರು. ವಿ.ನಾಗರಾಜ್ ಜಮಾ-ಖರ್ಚುಗಳ ವಿವರಗಳನ್ನು ಹಾಗೂ ಸುವರ್ಣಮ್ಮ ಸಂಘದ ವರದಿಯನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.