ಶಿಡ್ಲಘಟ್ಟ: ಪಡಿತರ ಚೀಟಿ ಮಾಡಿಕೊಡಲು ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ಆಹಾರ ಇಲಾಖೆ ಶಿರಸ್ತೇದಾರ್ ರಂಗನಾಥ್ ಅವರನ್ನು ಪಡಿತರ ವಿತರಣಾ ಕೇಂದ್ರದಲ್ಲಿಯೇ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಸೋಮವಾರ ನಡೆದಿದೆ.
‘ಪಡಿತರ ವಿತರಣಾ ಕೇಂದ್ರದಲ್ಲಿ ನಿಯಮಗಳ ಉಲ್ಲಂಘನೆಯಾಗುತ್ತಿದೆ’ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ರಂಗನಾಥ್ ಅವರನ್ನು ಗ್ರಾಮಸ್ಥರು, ‘ಗ್ರಾಮದ 90 ಕಾರ್ಡ್ಗಳನ್ನು ಏಕಾಏಕಿ ಏಕೆ ವಜಾ ಮಾಡಿದ್ದೀರಿ? ಕಾರ್ಡ್ ಮಾಡಿಕೊಡಲು ಏಕೆ ಹಣ ಪಡೆಯುತ್ತಿದ್ದೀರಿ?’ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.
ಈ ಸಂದರ್ಭ ಗ್ರಾಮಸ್ಥರೊಡನೆ ಮಾತಿನ ಚಕಮಕಿ ನಡೆಯಿತು. ‘ಮಂಜೂರಾಗಿರುವ ಪಡಿತರವನ್ನು ಅಸ್ತಿತ್ವದಲ್ಲಿರುವ ಮತ್ತು ರದ್ದುಗೊಂಡಿರುವ ಪಡಿತರ ಚೀಟಿಗಳಿಗೆ ಸಮಾನವಾಗಿ ಹಂಚಿಕೆ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದರು. ಆದರೆ ರಂಗನಾಥ್ ಈ ವ್ಯವಸ್ಥೆ ನಿಲ್ಲಿಸುವಂತೆ ನ್ಯಾಯಬೆಲೆ ಆಂಗಡಿ ವಿತರಕರಿಗೆ ತಾಕೀತು ಮಾಡುತ್ತಿದ್ದರು’ ಎಂದು ಗ್ರಾಮಸ್ಥರು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಹನುಮಂತಪ್ಪ, ‘ವಿಷಯ ಕುರಿತು ತಹಶೀಲ್ದಾರರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿ ಶಿರಸ್ತೆದಾರರನ್ನು ಕರೆದೊಯ್ದರು.
ಮುಖಂಡರಾದ ಕೇಶವಮೂರ್ತಿ, ಕೆಂಪೇಗೌಡ, ವಿ.ನಾರಾಯಣಸ್ವಾಮಿ, ಶ್ಯಾಮಸುಂದರ್, ಮಹೇಂದ್ರ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.