ADVERTISEMENT

ಇಬ್ಬರು ಮಕ್ಕಳ ಕತ್ತುಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:06 IST
Last Updated 22 ಅಕ್ಟೋಬರ್ 2017, 5:06 IST
ಸ್ಥಳದಲ್ಲೇ ಮೃತಪಟ್ಟ ಯೋಗೇಶ್(೧೧) ಬಾಲಕನನ್ನು ಪೊಲೀಸರು ಮನೆಯಿಂದ ಜಿಲ್ಲಾಆಸ್ಪತ್ರೆಗೆ ಸಾಗಿಸುತ್ತಿರುವುದು.
ಸ್ಥಳದಲ್ಲೇ ಮೃತಪಟ್ಟ ಯೋಗೇಶ್(೧೧) ಬಾಲಕನನ್ನು ಪೊಲೀಸರು ಮನೆಯಿಂದ ಜಿಲ್ಲಾಆಸ್ಪತ್ರೆಗೆ ಸಾಗಿಸುತ್ತಿರುವುದು.   

ಚಿಕ್ಕಬಳ್ಳಾಪುರ: ನಗರದ ಮುನ್ಸಿಪಲ್ ಲೇಔಟ್‌ನಲ್ಲಿ ಶನಿವಾರ ಶಿಲ್ಪಾ (27) ಎಂಬಾಕೆ ತನ್ನ ಇಬ್ಬರು ಮಕ್ಕಳ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆ ಪುತ್ರ ಯೋಗೀಶ್ (11) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪುತ್ರಿ ಅನುಷಾ (7) ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಶಿಲ್ಪಾ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತಾಲೂಕಿನ ಅಜ್ಜವಾರ ಗ್ರಾಮದ ಶಿಲ್ಪಾ ಹಾಗೂ ಬೆಂಗಳೂರಿನ ರವಿಚಂದ್ರ ಅವರ ವಿವಾಹ 2006ರಲ್ಲಿ ನಡೆದಿತ್ತು. ದಾಂಪತ್ಯದಲ್ಲಿ ಕಲಹ ಉಂಟಾಗಿ 2013ರಲ್ಲಿ ಆಕೆ ಪತಿಯಿಂದ ‌ವಿಚ್ಛೇದನ ಪಡೆದಿದ್ದಳು. ನಂತರ ತಂದೆ ಮನೆಯಲ್ಲಿ ನೆಲೆಸಿದ್ದಳು.

ಗಾರ್ಮೆಂಟ್‌ ಕೆಲಸಕ್ಕೆ ಹೋಗುತ್ತಿದ್ದ ಶಿಲ್ಪಾಗೆ ಗೋಪಿನಾಥ್ ಎಂಬುವವರು ಪರಿಚಯವಾಗಿದೆ. ಕೆಲ ದಿನಗಳ ಬಳಿಕ ಗೋಪಿನಾಥ್ ಚಿಕ್ಕಬಳ್ಳಾಪುರದಲ್ಲಿ ಬಾಡಿಗೆ ಮನೆ ಮಾಡಿ ಆಕೆಯನ್ನು ಇರಿಸಿದ್ದ. ಇತ್ತೀಚೆಗೆ ದಿನಗಳಲ್ಲಿ ಗೋಪಿನಾಥ್ ಹಾಗೂ ಶಿಲ್ಪಾ ನಡುವೆ ಜಗಳ ನಡೆಯುತ್ತಿತ್ತು.

ADVERTISEMENT

ಇದರಿಂದ ಮನನೊಂದ ಆಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಹಾಕಿಕೊಂಡು ಮಕ್ಕಳ ಕತ್ತನ್ನು ಚಾಕುವಿನಿಂದ ಕೊಯ್ದಿದ್ದಾಳೆ. ನಂತರ ತನ್ನ ಕೈ ಹಾಗೂ ಕತ್ತು ಕುಯ್ದುಕೊಂಡಿದ್ದಾಳೆ.

ಕೆಲವೇ ಕ್ಷಣದಲ್ಲಿ ಗೋಪಿನಾಥ್ ಬಾಗಿಲು ತಟ್ಟಿದ್ದು, ಅನುಷಾ ಬಾಗಿಲು ತೆಗೆದಿದ್ದಾಳೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.