ADVERTISEMENT

ಎಮ್ಮೆ ಗುಟ್ಟೆ ಅರಣ್ಯದಲ್ಲಿ ಮರಗಳ ಮಾರಣ ಹೋಮ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 8:48 IST
Last Updated 2 ಡಿಸೆಂಬರ್ 2017, 8:48 IST
ಸೋನಗಾನಹಳ್ಳಿ ಗ್ರಾಮದ ಎಮ್ಮೆ ಗುಟ್ಟೆ ಅರಣ್ಯ ಪ್ರದೇಶದಲ್ಲಿ ಕತ್ತರಿಸಿದ ಮರಗಳು
ಸೋನಗಾನಹಳ್ಳಿ ಗ್ರಾಮದ ಎಮ್ಮೆ ಗುಟ್ಟೆ ಅರಣ್ಯ ಪ್ರದೇಶದಲ್ಲಿ ಕತ್ತರಿಸಿದ ಮರಗಳು   

ಗೌರಿಬಿದನೂರು: ತಾಲ್ಲೂಕಿನ ಸೋನಗಾನಹಳ್ಳಿ ಗ್ರಾಮದ ಎಮ್ಮೆ ಗುಟ್ಟೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳ ಕಳ್ಳಸಾಗಾಣಿಕೆ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎನ್ನುವ ಆರೋಪದ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

‘ಎಮ್ಮೆಗುಟ್ಟೆ ಅರಣ್ಯ ಪ್ರದೇಶದ ಕಾವಲುಗಾರರನ್ನು ಕುರೂಡಿ ಬಳಿಯಿರುವ ನರ್ಸರಿಯಲ್ಲಿ ಕೆಲಸಕ್ಕೆ ನೇಮಕ ಮಾಡಿರುವುದರಿಂದ ಕಳೆದ ಎರಡು ತಿಂಗಳಿನಿಂದ ಮರಗಳ್ಳರು ಹಗಲಿನಲ್ಲಿ ಸಾವಿರಾರು ಮರಗಿಡಗಳನ್ನು ಕಡಿದು ರಾತ್ರಿ ಸಮಯದಲ್ಲಿ ಟ್ರ್ಯಾಕ್ಟರ್ ಮೂಲಕ ಸಾಗಿಸುತ್ತಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸೋನಗಾನಹಳ್ಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು ತಿಳಿಸಿದರು.

ADVERTISEMENT

‘ಎಮ್ಮೆ ಗುಟ್ಟೆ ಅರಣ್ಯ ಪ್ರದೇಶಕ್ಕೆ ತಕ್ಷಣವೇ ಕಾವಲುಗಾರರನ್ನು ನೇಮಕ ಮಾಡಬೇಕು. ಈ ಪರಿಸರ ನಾಶವನ್ನು ತಡೆಗಟ್ಟಬೇಕು. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುತ್ತಿರುವ ಮರಗಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು
ಆಗ್ರಹಿಸಿದರು.

ಈ ಕುರಿತು ಅರಣ್ಯ ಇಲಾಖೆ ಅಧಿಕಾರಿ ಕೃಷ್ಣ ಅವರನ್ನು ಪ್ರಶ್ನಿಸಿದರೆ, ‘ಸೋನಗಾನಹಳ್ಳಿ ಎಮ್ಮೆಗುಟ್ಟೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದಿರುವ ಮರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.ಮರ ಕಡಿದಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳೀಯರೆ ಈ ಕೃತ್ಯ ನಡೆಸುತ್ತಿರುವುದು ತಿಳಿದು ಬಂದಿದೆ. ಶೀಘ್ರದಲ್ಲೇ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.