ADVERTISEMENT

ಕಮ್ಯುನಿಸ್ಟರಿಂದ ಹಿಂದೂಗಳ ಹತ್ಯೆ: ಆರೋಪ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 5:54 IST
Last Updated 30 ಅಕ್ಟೋಬರ್ 2017, 5:54 IST

ಚಿಕ್ಕಬಳ್ಳಾಪುರ: ಅಖಿಲ ಭಾರ ತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಕಮ್ಯುನಿಸ್ಟ್ ಹಿಂಸಾಚಾರ ಖಂಡಿಸಿ ನವೆಂಬರ್ 11 ರಂದು ತಿರುವನಂತಪುರದಲ್ಲಿ ಹಮ್ಮಿಕೊಂಡಿರುವ ‘ಚಲೋ ಕೇರಳ’ ಮೆರವಣಿಗೆಯ ಭಿತ್ತಿಪತ್ರಗಳನ್ನು ನಗರದಲ್ಲಿ ನಟ ಸಾಯಿಕುಮಾರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಮ್ಮ ಪುರಾತನ ಸಂಸ್ಕೃತಿಯ ಗತವೈಭವವನ್ನು ಸಾರುವ ಹಲವು ದೇವಾಲಯಗಳನ್ನು ಹೊಂದಿ, ದೇವರ ನಾಡು ಎಂದು ಖ್ಯಾತಿ ಗಳಿಸಿರುವ ಕೇರಳದಲ್ಲಿ ರಾಷ್ಟ್ರೀಯ ಬದ್ಧತೆ ಸಂಘ ಪರಿವಾರದ ಹಾಗೂ ಎಬಿವಿಪಿಯ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿರುವುದು ಖಂಡನೀಯ’ ಎಂದರು.

‘ಇವತ್ತು ಕೇರಳದಲ್ಲಿರುವ ಕಮ್ಯುನಿಸ್ಟ್‌ ಸರ್ಕಾರ ಆರ್‌.ಎಸ್‌.ಎಸ್‌, ಎಬಿವಿಪಿ ಕಾರ್ಯಕರ್ತರ ಹತ್ಯೆಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಈ ಹಿಂಸಾಚಾರಕ್ಕೆ ತಡೆ ಒಡ್ಡುವ ನಿಟ್ಟಿನಲ್ಲಿ ಎಬಿವಿಪಿ ಹಮ್ಮಿಕೊಂಡಿರುವ ಈ ಚಲೋ ಯಶಸ್ವಿಯಾಗಲಿ’ ಎಂದು ಹಾರೈಸಿದರು.

ADVERTISEMENT

ಎಬಿವಿಪಿ ವಿಭಾಗ ಸಂಚಾಲಕ ಮಂಜುನಾಥ್‌ ರೆಡ್ಡಿ, ‘ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಮ್ಯುನಿಸ್ಟರು ಸೈದ್ಧಾಂತಿಕ ವಿರೋಧಿಗಳ ಹತ್ಯೆಗೈದು ಆ ದುಷ್ಕೃತ್ಯಗಳನ್ನು ಸಂಭ್ರಮಿಸುತ್ತಿದ್ದಾರೆ. ಕಳೆದ 7 ದಶಕಗಳಲ್ಲಿ ಕೇರಳದಲ್ಲಿ 280ಕ್ಕೂ ಅಧಿಕ ಹಿಂದುತ್ವವಾದಿಗಳ ಕಗ್ಗೊಲೆಯಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಎಬಿವಿಪಿ ಕೇರಳ ಚಲೋ ಹಮ್ಮಿಕೊಂಡಿದೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಘಟಕದ ಸಹ ಸಂಚಾಲಕ ಚರಣ್ ರೆಡ್ಡಿ, ಕಾರ್ಯಕರ್ತರಾದ ಮಲ್ಲಿಕಾರ್ಜುನರೆಡ್ಡಿ, ಭರತ್ ರೆಡ್ಡಿ, ಕಿರಣ್ ಕುಮಾರ್, ಚೇತನ್, ವಿನಯ್‌ ಕುಮಾರ್, ರಘು, ಸಂತೋಷ್, ರವಿ, ಮಿಥುನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.