ADVERTISEMENT

ಕಳ್ಳಬಟ್ಟಿ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 10:55 IST
Last Updated 12 ಜನವರಿ 2012, 10:55 IST
ಕಳ್ಳಬಟ್ಟಿ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಆದ್ಯತೆ
ಕಳ್ಳಬಟ್ಟಿ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಆದ್ಯತೆ   

ಚಿಕ್ಕಬಳ್ಳಾಪುರ: ಸಾರ್ವಜನಿಕರ ಆರೋಗ್ಯ ಮತ್ತು ಉತ್ತಮ ಜೀವನದ ಹಿತದೃಷ್ಟಿಯಿಂದ ಸಾರಾಯಿ, ಕಳ್ಳಬಟ್ಟಿ ಮುಂತಾದವುಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ಕಳ್ಳಬಟ್ಟಿಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ವಿಶೇಷ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ನಂಜಪ್ಪ ತಿಳಿಸಿದರು.

ತಾಲ್ಲೂಕಿನ ರೆಡ್ಡಗೊಲ್ಲವಾರಹಳ್ಳಿ ಗ್ರಾಮದ ಚಿತ್ರಪಿನಾಕಿನಿ ಪ್ರೌಢಶಾಲೆ ಆವರಣದಲ್ಲಿ ಈಚೆಗೆ ನಡೆದ `ಸಾಮಾಜಿಕ ಅರಿವು ಮತ್ತು ಜನಸಂಪರ್ಕ ಸಭೆ~ ಉದ್ಘಾಟಿಸಿ ಮಾತನಾಡಿ, `ಕಳ್ಳಬಟ್ಟಿಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಗ್ರಾಮಸ್ಥರು ಸಹಕರಿಸಬೇಕು~ ಎಂದರು.

`ಜನರ ಪೌಷ್ಟಿಕತೆ ಮಟ್ಟ ಹೆಚ್ಚಿಸಲು ಮತ್ತು ಆರೋಗ್ಯ ಸುಧಾರಿಸಲು ವಿಶೇಷ ಔಷಧಿ ತಯಾರಿಸಲಾಗುತ್ತಿದೆ. ಜನರು ನೆಮ್ಮದಿಯ ಜೀವನದಿಂದ ವಿಮುಖವಾಗದಿರಲಿ ಎಂಬ ಉದ್ದೇಶದಿಂದ ಕಳ್ಳಬಟ್ಟಿ ಸಾರಾಯಿ, ನಕಲಿ ಮದ್ಯ, ಸ್ಪಿರಿಟ್, ಸೇಂದಿ ಮುಂತಾದವುಗಳನ್ನು ತಯಾರಿಸುವುದು ಮತ್ತು ಮಾರುವುದು ನಿಷೇಧಿಸಲಾಗಿದೆ~ ಎಂದು ಹೇಳಿದರು.

`ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ವಿಶೇಷ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ 115 ಗ್ರಾಮಗಳನ್ನು ಮತ್ತು ತಾಂಡಗಳನ್ನು ಕಳ್ಳಬಟ್ಟಿಯಿಂದ ಮುಕ್ತಗೊಳಿಸಲಾಗಿದೆ. ಕಳ್ಳಬಟ್ಟಿ ತಯಾರಕರ ಮತ್ತು ಮಾರಾಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಉಲ್ಲಂಘಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ದಂಡ ಸಹಿತ ಕಠಿಣ ಶಿಕ್ಷೆಗೆ ಗುರಿಪಡಿಸ ಲಾಗುತ್ತದೆ~ ಎಂದು ಅವರು ತಿಳಿಸಿದರು.

ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಪುಟ್ಟಸ್ವಾಮಿ ಮತ್ತು ನವೀನ್‌ಕುಮಾರ್ ಅವರು ಕಳ್ಳಬಟ್ಟಿ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು. ಬಾಲಕಿಯರ ಕಬಡ್ಡಿ ಪಂದ್ಯಾ ವಳಿಯಲ್ಲಿ ಜಯಗಳಿಸಿದ ರೋಜಾ ಮತ್ತು ತಂಡದವರಿಗೆ ಬಹುಮಾನ ನೀಡಲಾಯಿತು. ಶಾಲಾ ವಿದ್ಯಾರ್ಥಿಗಳು, `ಬೇಡುವೆನು ವರವ ಕುಡುಕನಲ್ಲದ ಗಂಡನನ್ನು~ ನಾಟಕ ಪ್ರದರ್ಶಿಸಿದರು.

ಮುಖ್ಯಶಿಕ್ಷಕಿ ಟಿ.ಸುನೀತಾ ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಮುದ್ದುನಾರಾಯಣಪ್ಪ, ಜಗದೀಶ್‌ರೆಡ್ಡಿ, ಈಶ್ವರಪ್ಪ, ಸವಿತಾ ಮಂಜುನಾಥ್, ಗ್ರಾಮದ ಮುಖಂಡ ರಾದ ಕಮಲಮ್ಮ, ವೆಂಕಟೇಶ್‌ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.