ADVERTISEMENT

ಕುಡಿಯುವ ನೀರಿಗಾಗಿ ಆಗ್ರಹ: ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 10:32 IST
Last Updated 3 ಏಪ್ರಿಲ್ 2013, 10:32 IST
ಚಿಂತಾಮಣಿ ತಾಲ್ಲೂಕಿನ ಯರ‌್ರಕೋಟೆ ಗ್ರಾಮದ ಮಹಿಳೆಯರು ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸುವಂತೆ ಒತ್ತಾಯಿಸಿ ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಚಿಂತಾಮಣಿ ತಾಲ್ಲೂಕಿನ ಯರ‌್ರಕೋಟೆ ಗ್ರಾಮದ ಮಹಿಳೆಯರು ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸುವಂತೆ ಒತ್ತಾಯಿಸಿ ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.   

ಚಿಂತಾಮಣಿ: ಎರಡು ತಿಂಗಳಿಂದ ನೀರಿಲ್ಲದೆ ಪರದಾಡುತ್ತಿರುವ ತಾಲ್ಲೂಕಿನ ಯರ‌್ರಕೋಟೆ ಗ್ರಾಮದ ಮಹಿಳೆಯರು ಮಂಗಳವಾರ ಮುರುಗಮಲ್ಲ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಯರ‌್ರಕೋಟೆ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಕುಡಿಅಕ್ರೋಶಗೊಂಡು  ಗ್ರಾಮ ಪಂಚಾಯಿತಿ ಕಚೇರಿಗೆ ಬಿಂದಿಗೆಗಳೊಂದಿಗೆ ಮುತ್ತಿಗೆ ಹಾಕಿ, ಕೂಡಲೆ ಗ್ರಾಮದಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.

ಗ್ರಾಮದಲ್ಲಿ ಅನುಕೂಲಸ್ಥರು ಅಕ್ರಮ ನಲ್ಲಿ ಸಂಪರ್ಕ ಪಡೆದು ಮತ್ತು ಸಂಪ್‌ಗಳನ್ನು ನಿರ್ಮಿಸಿಕೊಂಡು ಅಲ್ಪಸ್ವಲ್ಪ ನೀರನ್ನು ಶೇಖರಿಸಿಕೊಂಡು ಬಳಸಿಕೊಳ್ಳುತ್ತಿದ್ದಾರೆ.  ಆದರೆ ದಲಿತರು, ಕೂಲಿ ಕಾರ್ಮಿಕರು, ಬಡವರು ಕುಡಿಯುವ ನೀರು ಸಿಗದೆ ಹಾಹಾಕಾರ ಉಂಟಾಗಿದ್ದು ಜೀವನವೇ ದುಸ್ತರವಾಗಿದೆಯೆಂದು ಮಹಿಳೆಯರು ಆರೋಪಿಸಿದರು.

ಜಲಗಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಓ.ಎಚ್.ಟಿ. ಗೇಟ್‌ವಾಲ್ವ್ ದುರಸ್ತಿಗಾಗಿ ತೆಗೆದುಕೊಂಡು ಹೋಗಿದ್ದು ಇದುವರೆಗೂ ಸರಿ ಮಾಡಿಸಿಲ್ಲ.  ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರೆಸಿ ಜನತೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿರತರು  ಆರೋಪಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಕಚೇರಿಯತ್ತ ಬರುವುದೇ ಇಲ್ಲ, ಪ್ರಶ್ನಿಸಿದರೆ  ಯಗವಕೋಟೆ, ಮುರುಗಮಲ್ಲ ಗ್ರಾಮ ಪಂಚಾಯಿತಿಗಳ ಪಿಡಿಓ ಪ್ರಭಾರ ಮತ್ತು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲೂ ಕೂಡ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಉತ್ತರಿಸುತ್ತಾರೆ ಎಂದು ಟೀಕಿಸಿದರು.

ಮುಖಂಡರಾದ ವೈ.ಕೆ.ನಂದಕುಮಾರ್, ಟಿ.ನಾರಾಯಣಸ್ವಾಮಿ, ಶಿವರಾಮರೆಡ್ಡಿ, ನಾಗರಾಜ್, ಬಾಬು, ನಾರಾಯಣಸ್ವಾಮಿ, ಜಯಮ್ಮ, ರೂಪ, ಲಾವಣ್ಯ, ಜಯಮ್ಮ, ಚನ್ನಮ್ಮ, ರಾಧಮ್ಮ, ಮುನಿಗಂಗುಲಮ್ಮ, ಪುಷ್ಪಾವತಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.