ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 9:59 IST
Last Updated 27 ಫೆಬ್ರುವರಿ 2018, 9:59 IST
ಸ್ವಾಭಿಮಾನಿ ಸಮಾವೇಶದಲ್ಲಿ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು
ಸ್ವಾಭಿಮಾನಿ ಸಮಾವೇಶದಲ್ಲಿ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು   

ಚಿಂತಾಮಣಿ: ವಿದೇಶ ಪ್ರವಾಸಗಳ ಅನುಭವ ಹಾಗೂ ಅಲ್ಲಿಯ ಅಭಿವೃದ್ಧಿಯ ಮಾದರಿಯನ್ನು ಕ್ಷೇತ್ರದಲ್ಲಿ ಅಳವಡಿಸಿ ಚಿಂತಾಮಣಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಮಾಡಿದ್ದೆ. ಆದರೆ ನಂತರ ಬಂದವರು ಎಲ್ಲ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮುಖಂಡ ಡಾ.ಎಂ.ಸಿ.ಸುಧಾಕರ್‌ ಆರೋಪಿಸಿದರು.

ಅವರ ಡಾ. ಸುಧಾಕರ್‌ ಅಭಿಮಾನಿಗಳ ಬಳಗವು ನಗರದಲ್ಲಿ ಹಮ್ಮಿಕೊಂಡಿದ್ದ ‘ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದರು. ‘ನಾನು ಈ ಮಣ್ಣಿನಲ್ಲಿ ಹುಟ್ಟಿ, ಬೆಳೆದಿದ್ದೇನೆ. ಇಲ್ಲಿಯ ಸಂಸ್ಕೃತಿಯ ಅರಿವಿದೆ. ಇಲ್ಲಿಯ ಮಣ್ಣಿನ ಋಣ ತೀರಿಸಲು ಕ್ಷೇತ್ರದ ಅಭಿವೃದ್ಧಿ ಕಲ್ಪನೆ ಹೊಂದಿದ್ದೇನೆ’ ಎಂದು ತಿಳಿಸಿದರು.

‘ವಿರೋಧಿ ಮುಖಂಡರು ಚುನಾವಣೆಯ ಸಂದರ್ಭದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಚೌಡರೆಡ್ಡಿ ಮುಖ್ಯಮಂತ್ರಿ ದೇವರಾಜ ಅರಸ್‌ ಅವರನ್ನು ಕಾಡಿಬೇಡಿ ಜಿಲ್ಲೆಯಲ್ಲೇ ಪ್ರಥಮವಾಗಿ ಚಿಂತಾಮಣಿಗೆ ಒಳಚರಂಡಿ ವ್ಯವಸ್ಥೆಯನ್ನು ಮಂಜೂರು ಮಾಡಿಸಿದ್ದರು. ಜೋಡಿ ರಸ್ತೆಗೆ ಚಾಲನೆ ನೀಡಿದ್ದರು. ನಾನು ಆ ಕೆಲಸ ಮುಂದುವರಿಸಿ, ನಾಲ್ಕೂ ದಿಕ್ಕಿನಲ್ಲಿ ರಸ್ತೆ ಅಭಿವೃದ್ಧಿ ಮಾಡಿದ್ದೇನೆ’ ಎಂದು ವಿವರಿಸಿದರು.

ADVERTISEMENT

ನಗರದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ, ನಗರದ ಮದ್ಯಭಾಗದಲ್ಲಿ ಮಾದರಿ ಕ್ರೀಡಾಂಗಣ, ಮಾವು ಅಭಿವೃದ್ಧಿ ಕೇಂದ್ರ, ಶಾಲಾ ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡಗಳು, ವಿಶ್ವಬ್ಯಾಂಕ್‌ ನೆರವಿನಲ್ಲಿ ರಸ್ತೆಗಳ ಅಭಿವೃದ್ಧಿ, ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ವ್ಯವಸ್ಥೆ, ಪ್ರವಾಸಿ ಮಂದಿರ, ತಾಲ್ಲೂಕು ಕಚೇರಿ, ನ್ಯಾಯಾಲಯದ ನವೀಕರಣ, ಸರ್ಕಾರಿ ಆಸ್ಪತ್ರೆಯ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ನುಡಿದರು.

ರಾಜಕೀಯದಿಂದ ಎಂಬುದು ಸಮಾಜಸೇವೆ. ಆದರೆ ಈಗ ದಲ್ಲಾಳಿ ವ್ಯಾಪಾರ ಮಾಡುವುದೇ ರಾಜಕೀಯ ಸಮಾಜಸೇವೆ ಎಂಬಂತಾಗಿದೆ. ಕ್ಷೇತ್ರದ ಜನಪ್ರತಿನಿಧಿಗಳು ಈಗ ಯಾವ ರೀತಿಯ ಸಮಾಜ ಸೇವೆ ಮಾಡಿದ್ದಾರೆ ಎಂಬುದನ್ನು ಅರಿಯಬೇಕು ಎಂದು ತಿಳಿದ್ದಾರೆ.

ಮುಖಂಡರಾದ ಚೌಡರೆಡ್ಡಿ, ಶಾಂತಮ್ಮ ಚೌಡರೆಡ್ಡಿ, ಡಾ.ಬಾಲಾಜಿ, ಕೆ.ವಿ.ಸುಬ್ಬಾರೆಡ್ಡಿ, ವೆಂಕಟಶಿವಾರೆಡ್ಡಿ, ಮಂಜುನಾಥ ಅಯ್ಯರ್‌, ಮುನಿಶಾಮಿ ರೆಡ್ಡಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ನಗರಸಭೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.