ಗೌರಿಬಿದನೂರು: ತಾಲ್ಲೂಕಿನ ಕಲ್ಲಿನಾಥೇಶ್ವರ ಗುಟ್ಟೆಯಲ್ಲಿ ಗೋಶಾಲೆ ಮತ್ತು ಮೇವು ಬ್ಯಾಂಕು ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಸದಸ್ಯರು ಮತ್ತಿತರರು ಬುಧವಾರ ಜಾನುವಾರುಗಳ ಸಮೇತ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದರು.
ಜಾನುವಾರುಗಳನ್ನು ತಾಲ್ಲೂಕು ಕಚೇರಿಯ ಪ್ರವೇಶದ್ವಾರದ ಬಳಿ ಕರೆ ತಂದು ಪ್ರತಿಭಟನೆ ನಡೆಸಿದ ಸದಸ್ಯರು, `ರೈತರು ಮತ್ತು ಜಾನುವಾರುಗಳ ಹಿತದೃಷ್ಟಿಯಿಂದ ತಾಲ್ಲೂಕಿನ ಕಲ್ಲಿನಾಥೇಶ್ವರ ಗುಟ್ಟೆಯಲ್ಲಿ ಮೇವು ಬ್ಯಾಂಕು ಮತ್ತು ಗೋಶಾಲೆ ಕೂಡಲೇ ಆರಂಭಿಸಬೇಕು~ ಎಂದರು.
ರೈತ ಸಂಘದ ಮುಖಂಡ ಮುದ್ದರಂಗಪ್ಪ ಮಾತನಾಡಿ, `ಕಲ್ಲೂಡಿ ಗ್ರಾಮದ ಕಲ್ಲಿನಾಥೇಶ್ವರ ಗುಟ್ಟೆಯಲ್ಲಿ ಮೇವು ಬ್ಯಾಂಕ್ ಆರಂಭಿಸುವುದರಿಂದ ಗುಟ್ಟೆ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಮೇವಿಗಾಗಿ ಜಾನುವಾರುಗಳನ್ನು ದೂರದೂರಕ್ಕೆ ಕರೆದೊಯ್ಯುವುದರ ಬದಲು ಗೋಶಾಲೆಗೆ ಕರೆ ತರಲು ಅನುಕೂಲವಾಗುತ್ತದೆ~ ಎಂದರು.
`ಮೇವು ಸಿಗದ ಕಾರಣ ಜಾನುವಾರುಗಳು ಹಸಿವಿನಿಂದ ಬಳಲುತ್ತಿವೆ. ಜಾನುವಾರುಗಳ ಸಂಕಷ್ಟ ನೋಡಲಾಗದೇ ಗ್ರಾಮಸ್ಥರು ದಿಕ್ಕು ಗಾಣದ ಸ್ಥಿತಿಗೆ ತಲುಪಿದ್ದಾರೆ.
ಮೇವು ಬ್ಯಾಂಕ್ ಮತ್ತು ಗೋಶಾಲೆ ಸ್ಥಾಪನೆಗಾಗಿ ತಾಲ್ಲೂಕು ಆಡಳಿತಕ್ಕೆ ಹಲವಾರು ಬಾರಿಗೆ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ~ ಎಂದು ಅವರು ಆರೋಪಿಸಿದರು.
ರೈತ ಮುಖಂಡರಾದ ನಾರಾಯಣಪ್ಪ, ಲಕ್ಷ್ಮೀನರಸಿಂಹಪ್ಪ, ಗಂಗಾಧರಗೌಡ, ಆದಿನಾರಾಯಣಪ್ಪ, ನಾಗರಾಜ್, ಮಲ್ಲಿ, ನರಸಿಂಹಮೂರ್ತಿ, ಪ್ರಕಾಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.