ADVERTISEMENT

ಗೌರಿಬಿದನೂರಿನಲ್ಲಿ 500 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 5:13 IST
Last Updated 1 ಮಾರ್ಚ್ 2014, 5:13 IST

ಗೌರಿಬಿದನೂರು: ತಾಲ್ಲೂಕಿನ ಕುಡುಮಲ­ಕುಂಟೆ ಗ್ರಾಮದ ಸಮೀಪ 238 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಪಡಿಸಲಾಗುವುದು. ತಾಲ್ಲೂಕಿನಲ್ಲಿ ೫ ಕಂಪೆನಿಗಳು ₨ 500 ಕೋಟಿ ಬಂಡವಾಳ ಹೂಡಲು ಮುಂದೆ ಬಂದಿವೆ ಎಂದು ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಉದ್ದಿಮೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 10 ವರ್ಷ­ದಲ್ಲಿ 10 ಸಾವಿರ ಉದ್ಯೋಗ ಕಲ್ಪಿಸುವ ಗುರಿ ಇದೆ ಎಂದರು.

ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶಕ್ಕೆ ಬೆಂಗಳೂರಿನ ಕೊಳಚೆ ನೀರು ಶುದ್ಧೀಕರಣಗೊಳಿಸಿ ಪೂರೈಸ­ಲಾ­ಗು­ತ್ತಿದೆ. ಅದೇ ನೀರನ್ನು ಗೌರಿಬಿದನೂರು ಕುಡಮಲಕುಂಟೆ ಕೈಗಾರಿಕಾ ಪ್ರದೇಶಕ್ಕೆ ತರಲು ₨ 30ಕೋಟಿ ವೆಚ್ಚದ ಯೋಜನೆ ತಯಾರಾಗಿದೆ ಎಂದರು.

ಗೌರಿಬಿದನೂರಿಗೆ ದೇಶದ ವಿವಿಧೆಡೆ­ಯಿಂದ ಉತ್ತಮ ರಸ್ತೆ, ರೈಲು ಸಂಪರ್ಕ ಲಭ್ಯವಿದೆ. ಇದು ಚನ್ನೈ ಮತ್ತು ಮಂಗಳೂರು ಬಂದರುಗಳಿಗೆ ೪೦೦ ಕಿ.ಮೀಗೂ ಕಡಿಮೆ ದೂರದಲ್ಲಿದೆ. ರಿಲಯನ್ಸ್ ಸಿಮೆಂಟ್ ಕಂಪೆನಿ ತಾಲ್ಲೂಕಿನಲ್ಲಿ ₨ ೬೯೦ ಕೋಟಿ ಹೂಡಿಕೆ ಮಾಡಿ, ಕೈಗಾರಿಕೆ ನಿರ್ಮಿಸಲು ಆಲೋಚನೆ ನಡೆಸಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ಮಾತನಾಡಿ, ರೈಲ್ವೆ ಕ್ರಾಸಿಂಗನ ಕೆಳ ಸೇತುವೆ ಹಾಗೂ ಫ್ಲೆಓವರ್‌ಗಳ ಕಾಮಗಾರಿಗಳಿಗೆ ರಾಜ್ಯ­ದಲ್ಲಿ ₨ 373 ಕೋಟಿ ಬಿಡುಗಡೆ­ಯಾಗಿದೆ. ಅತಿ ವೇಗದ ರೈಲು ಸೌಲಭ್ಯ­ವನ್ನು ಪ್ರಮುಖ ಪಟ್ಟಣಗಳಿಗೆ ನೀಡಿದರೆ ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುತ್ತದೆ ಎಂದರು.

ಲಾರೆನ್ಸ್ ಕ್ಲಾಥಿಂಗ್ ಲಿಮಿಟೆಡ್, ಎಸ್ ಪಿ ರೋಸ್, ಲೆವೆನ್ ಎಚ್‌ಟಿ, ಡಿಪಿಕೆ ಎಂಜಿನಿಯರ್ ಹಾಗೂ ತುಳಸಿ ಬಿಕಾನ್ ಕಂಪೆನಿಗಳು  ತಾಲ್ಲೂಕಿನಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾ ಸಂಸ್ಥೆ ಅಧ್ಯಕ್ಷ ಆರ್.ಶಿವಕುಮಾರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಎಂ.ಮಹೇಶ್ವರರಾವ್, ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, ಜಿಲ್ಲಾ ಪಂಚಾ­ಯಿತಿ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಕೆ.ಎಲ್.ಶ್ರೀನಿವಾಸ­ಮೂರ್ತಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.