ADVERTISEMENT

ಚಿಂತಾಮಣಿ: ಪೌರಕಾರ್ಮಿಕರ ಶ್ರಮಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 9:19 IST
Last Updated 17 ಡಿಸೆಂಬರ್ 2012, 9:19 IST

ಚಿಂತಾಮಣಿ: ಪೌರಕಾರ್ಮಿಕರು ನಗರಸಭೆಯ ಬೆನ್ನೆಲುಬು. ಅವರ ಶ್ರಮದ ಫಲವಾಗಿ ಸ್ವಚ್ಛ ಸುಂದರ ನಗರವಾಗಿದೆ. ನಾಗರಿಕರಿಗೆ ಮೂಲಸೌಲಭ್ಯ ಒದಗಿಸುವಲ್ಲಿ ಸದಾ ನಿರತರಾಗಿರುವ ಪೌರಕಾರ್ಮಿಕರ ಬಗ್ಗೆ ಗೌರವ, ಮಾನವೀಯತೆ ತೋರಬೇಕು ಎಂದು ಪೌರಾಯುಕ್ತ ಡಾ.ರಾಮೇಗೌಡ ಮನವಿ ಮಾಡಿದರು.

ನಗರಸಭೆ ಹಾಗೂ ಪೌರ ಕಾರ್ಮಿಕರ ಸಂಘದ  ನಗರದಲ್ಲಿ ಶನಿವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.

ಇಲ್ಲಿನ ನಗರಸಭೆ ರಾಜ್ಯದಲ್ಲಿ ಮಾದರಿ ಎಂದು ಹೆಸರುಗಳಿಸಿದೆ. ಪೌರಕಾರ್ಮಿಕರು, ನಗರಸಭೆ ಅಧಿಕಾರಿಗಳು, ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ. ಅಧಿಕಾರಿಗಳು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳು ಪಕ್ಷಾತೀತವಾಗಿ ಸಹಕರಿಸಿ ಹುರಿದುಂಬಿಸುತ್ತಿರುವುದರಿಂದ ಉತ್ತಮ ಪ್ರಗತಿ ಸಾಧಿಸಲು ಸಾದ್ಯವಾಗಿದೆ ಎಂದರು.

ನಗರಸಭೆ ಅಧಿಕಾರಿಗಳು ಸಂಪನ್ಮೂಲ ಕ್ರೋಡೀಕರಣದಲ್ಲಿ ದಾಖಲೆ ನಿರ್ಮಿಸಿದ್ದಾರೆ. ನಗರದಲ್ಲಿ 21,842 ಆಸ್ತಿಗಳನ್ನು ಗುರುತಿಸಿ 2010-11 ರಲ್ಲಿ 1.38 ಲಕ್ಷ ರೂಪಾಯಿ, 2011-12 ರಲ್ಲಿ 1.68 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. 2012-13 ನೇ ಸಾಲಿನಲ್ಲಿ 2.56 ಲಕ್ಷ ರೂಪಾಯಿ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿಯನ್ನು ಹೊಂದಲಾಗಿದೆ. ನೀರಿನ ತೆರಿಗೆ ವಸೂಲಿ ಸ್ವಲ್ಪ ಮಂದ ಗತಿಯಲ್ಲಿ ಸಾಗಿದೆ. ಸಕಾಲದಲ್ಲಿ ತೆರಿಗೆನೀಡುವ ಮೂಲಕ ನಾಗರಿಕರು ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕೋರಿದರು.

ದಾನಿ ನಾರಾಯಣಸ್ವಾಮಿ ಮಾತನಾಡಿ, ಜನತೆ ಸೇವೆಯನ್ನು ಮಾಡಲು ಸದಾ ಸಿದ್ಧರಾಗಿರುವ ಪೌರಕಾರ್ಮಿಕರನ್ನು ಗೌರವ ಹಾಗೂ ಅನುಕಂಪದಿಂದ ಕಾಣಬೇಕು ಎಂದು ತಿಳಿಸಿ, ಈ ವರ್ಷ 200  ಪೌರಕಾರ್ಮಿಕರಿಗೆ ಬಟ್ಟೆ ನೀಡಿದ್ದೇನೆ, ಮುಂದಿನ ವರ್ಷ ಅವರ ಮಕ್ಕಳಿಗೂ ಸಹಾಯದ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷೆ ನಾಗರತ್ನಮ್ಮ ಮಹಿಳಾ ಪೌರಕಾರ್ಮಿಕರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೌರಕಾರ್ಮಿಕರಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆರಂಭದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು ಮೆರವಣಿಗೆ ನಡೆಸಿದರು.

ನಗರಸಭೆಯ ಉಪಾಧ್ಯಕ್ಷ ಎಲ್.ಚೌಡರೆಡ್ಡಿ, ಸದಸ್ಯ ಆರ್.ನಾರಾಯಣಗೌಡ, ನಾಗರಾಜ್, ಶ್ರಿನಿವಾಸರೆಡ್ಡಿ, ಸಾಹಿತಿ ಅಶ್ವತ್ಥನಾರಾಯಣ್, ಲೀಲಾ ಲಕ್ಷ್ಮೀನಾರಾಯಣ್, ಹಾಗೂ ಶ್ರಿಧರ್, ಸಿ.ಕೆ.ಬಾಬು, ಮಂಜುನಾಥ್, ಆರತಿ ಸೇರಿದಂತೆ  ನಗರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.