ಚಿಂತಾಮಣಿ: ತಾ ಲ್ಲೂಕಿನ ಕೋನೇಪಲ್ಲಿ ಗ್ರಾಮದಲ್ಲಿ ಸುಟ್ಟುಹೋಗಿರುವ 100 ಕೆ.ವಿ ಮತ್ತು 60 ಕೆ.ವಿ ಟ್ರಾನ್ಸ್ ಫಾ ರ್ಮರ್ಗಳನ್ನು ಬದಲಾಯಿಸಿ ಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಇಲ್ಲಿನ ಬೆಸ್ಕಾಂ ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರೆಯಿತು.
ಸೋಮವಾರ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಆರೋಪಿಸಿ ಗ್ರಾಮಾಂತರ ವಿಭಾಗದ ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸುವ ಸೌಜನ್ಯ ತೋರಿಸಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು.
ಮಂಗಳವಾರವೂ ಸಹ ರೈತರು ಇಲ್ಲಿನ ಎಇಇ ಕಚೇರಿ ಹಾಗೂ ಎಕ್ಸಿಕ್ಯುಟಿವ್ ಎಂಜಿನಿಯರ್ ಕಚೇರಿಗೂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಟ್ರಾನ್ಸ್ಫಾರ್ಮರ್ ಸುಟ್ಟುಹೋಗಿ ಒಂದು ತಿಂಗಳಾಗಿದ್ದು ಕುಡಿಯಲು ಸಹ ನೀರಿಲ್ಲ, ಸಾಲ ಸೋಲ ಮಾಡಿ ಇಟ್ಟಿದ್ದ ಬೆಳೆಗಳು ಒಣಗಿ ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟ ಆಗಿದ್ದರೂ ಅಧಿಕಾರಿಗಳು ಕಣ್ಣು- ಮುಚ್ಚಾಲೆ ಆಟ ಆಟಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಿಪಡಿಸಿದರು.
ನಗರ ಠಾಣೆಯ ಇನ್ಸ್ಪೆಕ್ಟರ್ ಸರ್ದಾರ್, ಎಕ್ಸಿಕ್ಯೂಟಿವ್ ಇಂಜನಿಯರ್ ರೇವಣಸಿದ್ದಯ್ಯ ಪ್ರತಿಭಟನಾಕಾರರೊಂದಿಗೆ ಮಾತನಾದರೂ ಸಮಸ್ಯೆ ಬಗೆಹರಿದಿಲ್ಲ. ತಾಲ್ಲೂಕಿನ ಅನೇಕ ಭಾಗಗಳಲ್ಲಿ ಈ ಸಮಸ್ಯೆ ಇದೆ. ನಮಗೆ 18 ಟ್ರಾನ್ಸ್ಫಾರ್ಮರ್ ಬೇಕು. ನಾಲ್ಕು ಮಾತ್ರ ಕೊಟ್ಟಿದ್ದಾರೆ, ಜೇಷ್ಠತೆ ಆಧಾರದ ಮೇಲೆ ನೀಡುತ್ತಿರುವುದಾಗಿ ಇಂಜನಿಯರ್ ತಿಳಿಸಿದರು.
ಸಮಸ್ಯೆ ಬಗೆಹರಿಯದಿದ್ದಲ್ಲಿ ನಾಳೆ ಸಹ ಪ್ರತಿಭಟನೆ ಮುಂದುವರೆಸುವುದಾಗಿ ರೈತರು ತಿಳಿಸಿದರು. ರೈತ ಸಂಘದ ಪದಾಧಿಕಾರಿಗಳಾದ ಬೈಪರೆಡ್ಡಿ, ರಘುನಾಥರೆಡ್ಡಿ, ನರಸಿಂಹಮೂರ್ತಿ, ರಮೇಶ್, ಚರನ್ನರಾಯಪ್ಪ, ವೆಂಕಟೇಶಪ್ಪ, ಆಂಜನೇಯರೆಡ್ಡಿ, ಸುಜಾನ್ಪಾಷಾ, ಅಶ್ವತ್ಥರೆಡ್ಡಿ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.