ADVERTISEMENT

ಚಿಕ್ಕಬಳ್ಳಾಪುರದಿಂದಲೇ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿರುವ ಚಿಕ್ಕ­ಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷದ ಮುಖಂಡ ಎಚ್‌.ಡಿ.­ಕುಮಾರ­ಸ್ವಾಮಿ ಗುರುವಾರ ಇಲ್ಲಿ ತಾತ್ವಿಕ ಒಪ್ಪಿಗೆ ನೀಡಿದರು.

ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಘೋಷಿಸಲೆಂದೇ ನಗರದ ಹೊರವಲಯದಲ್ಲಿ ಗುರು­ವಾರ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸುಮಾರು ಒಂದು ಗಂಟೆ ಕಾಲ ಮಾತನಾ­ಡಿದ ಅವರು ಕೊನೆಗೆ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ‘ನನ್ನ ಮೇಲೆ ಅಭಿಮಾನ ಇಟ್ಟಿರುವ ನಿಮ್ಮನ್ನು ಯಾವುದೇ ಕಾರಣಕ್ಕೂ ನಿರಾಸೆಗೊಳಿಸುವುದಿಲ್ಲ. ನಿಮ್ಮ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುತ್ತೇನೆ’ ಎಂದರು.

ಇದಕ್ಕೂ ಮುನ್ನ, ‘ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸು­ವುದಕ್ಕಿಂತ ಇತರ ಸವಾಲುಗಳೇ ಹೆಚ್ಚು ಇವೆ. ರಾಮನಗರ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು, ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಜೊತೆ ಚರ್ಚಸಿ ತೀರ್ಮಾನ ಕೈಗೊಳ್ಳಲು ಎರಡು ದಿನ ಕಾಲಾವಕಾಶ ಕೊಡಿ. ರಾಮನಗರ­ದಲ್ಲಿ ಶುಕ್ರವಾರ ಸಭೆ ನಡೆಸಿ, ಅಲ್ಲಿನ ಮುಖಂಡರು ಮತ್ತು ಕಾರ್ಯ­ಕರ್ತರೊಡನೆ ಚರ್ಚಿಸಿ ನಂತರ ನಿಮಗೆ ತೀರ್ಮಾನ ಹೇಳುತ್ತೇನೆ’ ಎಂದು ಮನವೊಲಿಸಲು ಯತ್ನಿಸಿ­ದರು.

ಅದಕ್ಕೆ ಮಣಿಯದ ಭಾರಿ ಸಂಖ್ಯೆಯ ಕಾರ್ಯ­ಕರ್ತರು, ‘ನೀವು ಇಲ್ಲಿಂದಲೇ ಸ್ಪರ್ಧಿಸಬೇಕು. ನಿಮ್ಮ ಮೇಲೆಯೇ ನಂಬಿಕೆ ಇಟ್ಟಿದ್ದೇವೆ’ ಎಂದರು. ಶಾಸಕರು ಸೇರಿ­ದಂತೆ ಎಲ್ಲರಿಂದ ಒತ್ತಡ ಹೆಚ್ಚುತ್ತಿ­ರು­ವುದನ್ನು ಅರಿತ ಕುಮಾರ­ಸ್ವಾಮಿ, ‘ನಾನು ಇಲ್ಲಿ ಸ್ಪರ್ಧಿಸು­ತ್ತೇ­ನೆಂದು ಘೋಷಿಸಿ­ಬಿಟ್ಟರೆ, ರಾಮನಗರದ ಕಾರ್ಯ­ಕರ್ತರು ವಿಷ ಸೇವಿಸಿ ಸಾಯುವುದಾಗಿ ಹೇಳಿ­ದ್ದಾರೆ.

ಮನೆ­ಯಲ್ಲಿ ತಾಯಿ­ಯವರೂ ಆತಂಕ­ಗೊಂಡಿ­ದ್ದಾರೆ. ಕಾಲಾವ­ಕಾಶ ನೀಡಿ’ ಎಂದರು. ಕಾರ್ಯ­ಕರ್ತ­ರು ಇದ್ಯಾ­ವುದಕ್ಕೂ ಒಪ್ಪಲಿಲ್ಲ. ಕೊನೆಗೆ ಅವರನ್ನು ಸಮಾಧಾನ­ಪಡಿಸಿದ ಅವರು, ‘ಈಗಿನಿಂ­ದಲೇ ಪ್ರಚಾರ ಆರಂಭಿಸಿ’ ಎಂದರು.

ಇಂದಿನಿಂದಲೇ ಮತಯಾಚಿಸಿ
ತಡ ಮಾಡದೇ ಇವತ್ತಿ­ನಿಂದಲೇ ಕುಮಾರ­ಸ್ವಾಮಿ ಹೆಸರಿನಲ್ಲಿ ಮತ­ಯಾಚಿ­ಸಲು ಆರಂಭಿಸಿ. ಚುನಾವಣಾ ಪ್ರಚಾರ ಕೈಗೊಳ್ಳಿ. ಒಂದೆರಡು ದಿನದಲ್ಲಿಯೇ ನಾಮಪತ್ರ ಸಲ್ಲಿಕೆ ದಿನಾಂಕ ತಿಳಿಸುತ್ತೇನೆ.
- ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.