ADVERTISEMENT

ಜನಪರ ಕಾರ್ಯಕ್ಕೆ ಆದ್ಯತೆ ನೀಡಿ: ಮೊಯಿಲಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 7:10 IST
Last Updated 19 ಜನವರಿ 2011, 7:10 IST

ಗೌರಿಬಿದನೂರು: ಕಾಂಗ್ರೆಸ್‌ನ ತತ್ವ ಮತ್ತು ಸಿದ್ಧಾಂತದ ಮೇಲೆ ನಂಬಿಕೆಯಿಟ್ಟು ಮತದಾರರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಹೆಚ್ಚಿ4ನ ಸ್ಥಾನಗಳನ್ನು ಗಳಿಸಿದೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಹೇಳಿದರು.

ಪಟ್ಟಣದ ಸೂರ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಿ.ಪಂ. ಮತ್ತು ತಾ.ಪಂ. ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಆಪರೇಷನ್ ಕಮಲ ತಂತ್ರ ಜಿಲ್ಲೆಯಲ್ಲಿ ಫಲಿಸಲಿಲ್ಲ. ಈ ಕಾರಣದಿಂದ ಕಾಂಗ್ರೆಸ್ ಜಿಲ್ಲೆಯಲ್ಲಿ ಜಯಭೇರಿ ಗಳಿಸಿದೆ’ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿಸಲು ಎಲ್ಲರೂ ಶ್ರಮಿಸಬೇಕು. ಜನರ ನಂಬಿಕೆಗೆ ದ್ರೋಹ ಬಗೆಯದೇ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಶಾಸಕರಾದ ಸಂಪಂಗಿ, ಶಿವಶಂಕರ ರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಕೆಂಚೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಎಂ.ಅಂಜನಪ್ಪ, ಪುರಸಭೆ ಅಧ್ಯಕ್ಷೆ ಗೀತಾ ಜಯಂಧರ್, ಮುಖಂಡರಾದ ಆನಂದ್ ಕುಮಾರ್, ವೇಣುಗೋಪಾಲರೆಡ್ಡಿ, ಎಂ.ಟಿ.ಮದನಗೋಪಾಲರೆಡ್ಡಿ, ಜಿ.ವಿ.ಕೃಷ್ಣಮೂರ್ತಿ, ಬಿ.ಕೆ.ಕೃಷ್ಣಮೂರ್ತಿ, ಕಾಂತರಾಜ್, ವೆಂಕಟರವಣ ಮತ್ತಿತರರು ಪಾಲ್ಗೊಂಡಿದ್ದರು.

ಮರ ಕಡಿತ: ದೂರು
ಚಿಂತಾಮಣಿ: ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯಿತಿಗೆ ಸೇರಿದ ಖಾದ್ರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಕಟಾವು ಮಾಡಿರುವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮುಖಂಡರಾದ ನರಸಿಂಹಯ್ಯ, ನಾರಾಯಣಸ್ವಾಮಿ, ನಯಾಜ್, ಕೆ.ಶ್ರೀನಿವಾಸ್, ಆರ್.ಎಂ.ಜಯರಾಮಯ್ಯ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಸರ್ಕಾರದ ದಾಖಲೆ ಪ್ರಕಾರ 140-160 ಎಕರೆ ಜಮೀನು ಇದೆ. ದೇವಾಲಯದ ಆಸುಪಾಸಿನಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಗಿದೆ. ಶಾಲಾ ಆವರಣದಲ್ಲಿ ಹಾಗೂ ದೇವಾಯದ ಸುತ್ತಮುತ್ತ 30 ವರ್ಷಗಳ ಹಳೆಯದಾದ ಮಾವು, ಬೇವು, ಜಾಲಿ, ಹುಣಸೆ ಮತ್ತಿತರ ಮರಗಳನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಗುರುವಾರ ರಾತ್ರೋರಾತ್ರಿ ಜೆಸಿಬಿ ಯಂತ್ರಗಳಿಂದ ಬುಡಮೇಲು ಮಾಡಿದ್ದಾರೆ ಎಂದು ತಿಳಿಸಿದರು.

ದೇವಾಲಯದ ಆವರಣದಲ್ಲಿ 60 ಹಾಗೂ ಶಾಲಾ ಆವರಣದಲ್ಲಿ 15 ಮರಗಳನ್ನು ಕತ್ತರಿಸಿ ಸಾಗಿಸುವ ಪ್ರಯತ್ನದಲ್ಲಿದ್ದಾಗ ಸುತ್ತಮುತ್ತಲ    ಜನರು ಕೃತ್ಯ ನಡೆಸಿರುವ ಶ್ರೀನಿವಾಸರೆಡ್ಡಿಯನ್ನು ವಿಚಾರಿಸಿದಾಗ ನಾನು ಈ ದೇವಾಲಯದ ಕನ್ವೀನಿಯರ್, ನನ್ನನ್ನು ಕೇಳುವ ಹಕ್ಕು ಯಾರಿಗೂ ಇಲ್ಲ ಎಂದು ಉದ್ದಟತನದ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದರು.ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಕೃತ್ಯ ನಡೆಸಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಭಕ್ತಾದಿಗಳು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.