ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಒದಗಿಸುವಲ್ಲಿ ಸ್ಥಳೀಯ ಸಂಸದರು ವಿಫಲರಾಗಿದ್ದಾರೆ. ಇಬ್ಬರೂ ಸಂಸದರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರೂ ತಮ್ಮ ಕ್ಷೇತ್ರಗಳಿಗೆ ನೀರಾವರಿ ಯೋಜನೆ ಜಾರಿಗೊಳಿಸಲು ಮುಂದಾಗುತ್ತಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆರೋಪಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಭಾನುವಾರ ಗಂಗಾದೇವಿ ಮಹಾದ್ವಾರ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸಚಿವರಾದ ವೀರಪ್ಪ ಮೊಯಿಲಿ ಮತ್ತು ಕೆ.ಎಚ್.ಮುನಿಯಪ್ಪ ಅವರು ನೀರಾವರಿ ಕುರಿತು ಕಾಳಜಿ ಮತ್ತು ಕಳಕಳಿ ಹೊಂದಿಲ್ಲ ಎಂದು ಟೀಕಿಸಿದರು.
ರೇಷ್ಮೆ, ಹಾಲು ಮತ್ತು ತರಕಾರಿ ಬೆಳೆಯುವ ಈ ಭಾಗದ ರೈತರು ನೀರಿನ ಅಭಾವ ಹಾಗೂ ಕೇಂದ್ರ ಸರ್ಕಾರದ ರೇಷ್ಮೆ ವಿರೋಧಿ ನೀತಿಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಚೀನಾದಲ್ಲಿ ಭೂಮಿಯೊಳಗೆ ಪೈಪುಗಳನ್ನು ಅಳವಡಿಸಿ ನೀರು ಪೋಲಾಗದಂತೆ ನೂರಾರು ಕಿಲೋಮೀಟರ್ ದೂರಕ್ಕೆ ಹರಿಸುತ್ತಾರೆ. ನಮ್ಮಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹೋಗುವ ನೀರನ್ನು ತಂತ್ರಜ್ಞಾನ ಬಳಸಿ ಬರಡು ಜಿಲ್ಲೆಗಳಿಗೆ ಹರಿಸಬಹುದು. ಆದರೆ ಇಚ್ಛಾಶಕ್ತಿ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದರು. ಶಾಸಕ ಕೆ.ಪಿ.ಬಚ್ಚೇಗೌಡ, ಕೋಚಿಮುಲ್ ನಿರ್ದೇಶಕರಾದ ಕೆ.ಗುಡಿಯಪ್ಪ, ಕೆ.ವಿ.ನಾಗರಾಜ್ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.