ADVERTISEMENT

ದೂಳು ಹಿಡಿಯುತ್ತಿರುವ ಆಂಬುಲೆನ್ಸ್

ತುರ್ತು ಚಿಕಿತ್ಸೆ ದೊರೆಯದೆ ಶಿಶು ಸಾವು: ಆರೋಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 7:44 IST
Last Updated 12 ಅಕ್ಟೋಬರ್ 2017, 7:44 IST
ದೂಳು ಹಿಡಿಯುತ್ತಿರುವ ಆಂಬುಲೆನ್ಸ್
ದೂಳು ಹಿಡಿಯುತ್ತಿರುವ ಆಂಬುಲೆನ್ಸ್   

ಬಾಗೇಪಲ್ಲಿ: ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒದಗಿಸಿರುವ ಆರೋಗ್ಯ ಕವಚ (108) ಆಂಬುಲೆನ್ಸ್‌   ಒಂದು ತಿಂಗಳಿಂದ ಆಸ್ಪತ್ರೆ ಮುಂದೆಯೇ ನಿಂತು ದೂಳು ತಿನ್ನುತ್ತಿದೆ. ಆಸ್ಪತ್ರೆ ವ್ಯಾಪ್ತಿಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಆಸ್ಪತ್ರೆ ವ್ಯಾಪ್ತಿಗೆ ಒಳಪಟ್ಟ ಬೋಯಿಪಲ್ಲಿ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಚೌಡಮ್ಮ ಎಂಬುವವರಿಗೆ ಗಂಡು ಮಗು ಜನಿಸಿತ್ತು. ಮಗು ತೀವ್ರ ಜ್ವರ ಮತ್ತು ಕಾಮಾಲೆಯಿಂದ ಬಳಲುತ್ತಿದ್ದ ಕಾರಣ ಪೋಷಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ವೈದ್ಯರು ತುರ್ತಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು.  ಪೋಷಕರು 108 ಆಂಬುಲೆನ್ಸ್ ಬಗ್ಗೆ ವಿಚಾರಿಸಿದಾಗ ಚಾಲಕ ನಮ್ಮಲ್ಲಿ ಶುಶ್ರೂಷಕರು ಇಲ್ಲ. ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗಿ ಎಂದು ಹೇಳಿದ್ದರು ಎನ್ನಲಾಗಿದೆ.

‘ಖಾಸಗಿ ವಾಹನಗಳನ್ನು ಹುಡುಕಿ ಮಗುವನ್ನು ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗುವ ವೇಳೆ ಮಗು ದಾರಿಯಲ್ಲೆ ಪ್ರಾಣ ಬಿಟ್ಟಿತು. 108 ಆಂಬುಲೆನ್ಸ್ ನಮಗೆ ನೆರವು ನೀಡಿದ್ದರೆ ನಾವು ಮಗು ಉಳಿಸಿಕೊಳ್ಳಬಹುದಿತ್ತು’ ಎಂದು ಚೌಡಮ್ಮ ಅಳಲು ತೋಡಿಕೊಂಡರು.

ADVERTISEMENT

ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಸತ್ಯನಾರಾಯಣರೆಡ್ಡಿ ಅವರನ್ನು ವಿಚಾರಿಸಿದರೆ, ‘108 ಆಂಬುಲೆನ್ಸ್ ನಿರ್ವಹಣೆ ಖಾಸಗಿ ಗುತ್ತಿಗೆದಾರರಿಗೆ ವಹಿಸಲಾಗಿದೆ. ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ’ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಆಂಬುಲೆನ್ಸ್ ಸೇವೆಗೆ ಸಜ್ಜುಗೊಳಿಸಬೇಕು. ಇಲ್ಲದಿದ್ದರೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.