ಚಿಂತಾಮಣಿ: ಕುರಿಗಳ ದೊಡ್ಡಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಹತ್ತು ಕುರಿಗಳನ್ನು ಸಾಯಿಸಿದ ಪ್ರಕರಣ ತಾಲ್ಲೂಕಿನ ಊಲವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.ಗ್ರಾಮದ ನಿವಾಸಿ ರಾಜೇಶ್ ಕುರಿಗಳನ್ನು ಸಾಕಿ ಜೀವನ ನಡೆಸುತ್ತಿದ್ದರು. ತಮ್ಮ ಮನೆ ಬಳಿಯ ದೊಡ್ಡಿಯಲ್ಲಿ ಕುರಿಗಳನ್ನು ಬಿಟ್ಟು ಮನೆಯಲ್ಲಿ ಮಲಗಿದ್ದರು. ಮಧ್ಯರಾತ್ರಿ ಬೀದಿನಾಯಿಗಳು ದೊಡ್ಡಿಗೆ ನುಗ್ಗಿ 10 ಕುರಿಗಳನ್ನು ತಿಂದಿವೆ. ಬೆಳಿಗ್ಗೆ 5 ಗಂಟೆಗೆ ನಾಯಿಗಳ ಹಿಂಡನ್ನು ಕಂಡು ಗಾಬರಿಯಾಗಿದ್ದಾಗಿ ಎಂದು ರಾಜೇಶ್ ತಿಳಿಸಿದರು.
ನಾಯಿಗಳನ್ನು ಓಡಿಸಿ ದೊಡ್ಡಿಯಲ್ಲಿ ನೋಡಿದಾಗ ಕುರಿಗಳು ಸತ್ತು ಬಿದ್ದಿದ್ದವು. ಕೆಲವು ಕುರಿಗಳು ಗಾಯಗೊಂಡಿದ್ದವು. ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದೆ ಎಂದು ತಿಳಿಸಿದರು. ಪಶು ವೈದ್ಯಾಧಿಕಾರಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ₹ 80 ಸಾವಿರ ನಷ್ಟವಾಗಿದೆ. ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಗ್ರಾಮದ ಸುತ್ತಮುತ್ತ ಕೋಳಿ ಫಾರಂ ಅಧಿಕವಾಗಿವೆ. ಅವುಗಳಿಂದ ನೊಣ ಹಾಗೂ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.