ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶನಿವಾರ ಮುಂಗಾರು ಮಾರುತದ ಮುಸುಕು ದಿನವಿಡೀ ಸರಿಯಲಿಲ್ಲ. ಮೋಡ ಮುಸುಕಿದ ವಾತಾವರಣದ ನಡುವೆಯೇ ಜೋರಾದ ತಂಗಾಳಿಯೊಂದಿಗೆ ಸುರಿ ಯುತ್ತಿದ್ದ ಮಳೆ ಬಿಸಿಲಿನ ಧಗೆ ಮರೆಸಿ ಒಂದೇ ದಿನದಲ್ಲಿ ಚಳಿ ಹುಟ್ಟಿಸಿತ್ತು.
ಬೆಳಿಗ್ಗೆಯಿಂದಲೇ ಕವಿದ ಮೋಡಗಳು ಕರಗಿ ಬಿಸಿಲು ಹರಿಯಲೇ ಇಲ್ಲ. ಆಗಾಗ ಹನಿಯು ತ್ತಿದ್ದ ಮಳೆಯಿಂದಾಗಿ ಜನರು ಬೆಳಿಗ್ಗೆಯಿಂದಲೇ ಛತ್ರಿ, ಬೆಚ್ಚನೆಯ ಉಡುಗೆಗಳ ಮೊರೆ ಹೋಗಿದ್ದರು. ಎರಡನೇ ಶನಿವಾರದ ರಜೆಯನ್ನು ಬಹುತೇಕರು ಮಳೆ, ಚಳಿಯಿಂದಾಗಿ ಮನೆಯಲ್ಲೇ ಕಳೆದರು.
ಕೆಲ ದಿನಗಳ ಹಿಂದಷ್ಟೇ ಸೆಕೆಯ ಬಾಧೆಗೆ ಮನೆಯಲ್ಲಿ ಬೆವರು ಹರಿಸುತ್ತಿದ್ದ ಜನರು ಶನಿವಾರ ಆಗಾಗ ಜೋರಾಗಿ ಬೀಸುತ್ತಿದ್ದ ತಣ್ಣನೆಯ ಗಾಳಿ ಮೈ ನಡುಕ ಉಂಟು ಮಾಡುತ್ತಿದ್ದ ಕಾರಣಕ್ಕೆ ಜನರು ದಿನವಿಡೀ ಮನೆ ಕಿಟಕಿ, ಬಾಗಿಲುಗಳನ್ನು ಮುಚ್ಚಿಯೇ ಇದ್ದರು. ಆಗಾಗ ಮಳೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಮಂಜು ನಗರದ ಸುತ್ತಲಿನ ಬೆಟ್ಟ, ಗುಡ್ಡಗಳನ್ನು ಆವರಿಸಿ ಪ್ರಕೃತಿಯ ರಮ್ಯದೃಶ್ಯಗಳನ್ನು ಸೃಷ್ಟಿಸುತ್ತಲೇ ಇತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.