ಚಿಕ್ಕಬಳ್ಳಾಪುರ: ತಾಲ್ಲೂಕಿನ ಕೆಲ ಗ್ರಾಮಗಳಿಗೆ ನಿಯಮಿತ ಬಸ್ ಸಂಚಾರವಿಲ್ಲ. ಪ್ರಯಾಣಿಕರು ಖಾಸಗಿ ವಾಹನ ಮತ್ತು ಆಟೊ ರಿಕ್ಷಾಗಳನ್ನು ಅವಲಂಬಿಸಿದ್ದಾರೆ.
ಚಿತ್ರಾವತಿ, ಹಾರೋಬಂಡೆ, ಮರಸನಹಳ್ಳಿ, ಪೆರೇಸಂದ್ರ ಮುಂತಾದ ಗ್ರಾಮಗಳಿಗೆ ಆಟೋರಿಕ್ಷಾ ಪ್ರಯಾಣ ಸಾಮಾನ್ಯವಾಗಿದೆ. ಕೇತನಹಳ್ಳಿ, ಮುಸ್ಟೂರು ಮುಂತಾದ ಗ್ರಾಮಗಳಿಗೆ ಟ್ರಾಕ್ಸ್ ಪ್ರಯಾಣ ಅನಿವಾರ್ಯ.
ವಾಹನ ಭರ್ತಿಯಾದ ಮೇಲೆ ಯುವಕರು, ವಿದ್ಯಾರ್ಥಿಗಳು ಟಾಪ್ ಪ್ರಯಾಣಕ್ಕೆ ಮುಂದಾ ಗುತ್ತಾರೆ. ಕೂತ ಸ್ಥಳದಲ್ಲಿ ಹಿಡಿದುಕೊಳ್ಳಲು ಯಾವುದೇ ಆಧಾರವಿಲ್ಲದೆ ಕೆಳಗೆ ಬೀಳುವ ಭಯದೊಂದಿಗೆ ಊರು ತಲುಪುವುದು ಸಾಮಾನ್ಯವಾಗಿದೆ.
ಟ್ರಾಕ್ಸ್ನಲ್ಲಿ 8 ರಿಂದ 12 ಜನ ಆರಾಮಾಗಿ ಪ್ರಯಾಣಿಸಬಹುದು. ಗ್ರಾಮಾಂತರ ಪ್ರದೇಶಕ್ಕೆ ತೆರಳುವ ವಾಹನಗಳಲ್ಲಿ 20ರಿಂದ 25 ಮಂದಿ ತುಂಬಿ ರುತ್ತಾರೆ. ವಾಹನದ ಮೇಲೆ ಐದಾರು ಮಂದಿ, ಬಾಗಿಲುಗಳಿಗೆ ನೇತು ಹಾಕಿಕೊಂಡು ಇಬ್ಬರು ಇರುತ್ತಾರೆ.
`ಏನು ಮಾಡೋದು ಸ್ವಾಮಿ, ನಮ್ಮೂರಿಗೆ ಸರ್ಕಾರಿ ಬಸ್ ಬರಲ್ಲ. ಸಂತೆ ಮಾಡಕ್ಕೆ ಟೌನ್ಗೆ ಬರ್ಬೇಕಲ್ವಾ?~ ಎಂದು ಗ್ರಾಮಸ್ಥರು ಅಸಹಾಯಕರಾಗಿ ಪ್ರಶ್ನಿ ಸುತ್ತಾರೆ.
`ಬಾಡಿಗೆ ಟ್ರಾಕ್ಸ್-ಆಟೋರಿಕ್ಷಾಗಳಲ್ಲಿ ಪ್ರಯಾಣಿ ಸಲು ಹೆಚ್ಚು ವ್ಯಯಿಸಬೇಕೆಂಬ ಕಾರಣಕ್ಕೆ ಅನೇಕರು ನಮ್ಮ ವಾಹನಗಳಲ್ಲಿ ಪ್ರಯಾಣಿಸುತ್ತಾರೆ. ಹತ್ತಲು ಬಂದವರಿಗೆ ಬೇಡ ಎನ್ನಲು ಆಗುವುದಿಲ್ಲ. ಹೀಗಾಗಿ ಅವ್ರಿಗೆ ಅಡ್ಜೆಸ್ಟ್ ಮಾಡ್ಕೊಂಡು ಕೂತ್ಕೊಳ್ಳಿ ಎಂದು ಹೇಳಿ ಯಾರಿಗೂ ತೊಂದರೆಯಾಗದಂತೆ ಕರೆದೊಯ್ಯುತ್ತೇವೆ~ ಎಂದು ವಾಹನ ಚಾಲಕರು ಹೇಳುತ್ತಾರೆ.
ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಬಸ್ ನಿಲ್ದಾಣದಿಂದ ಅರ್ಧಗಂಟೆಗೆ ಒಂದರಂತೆ ಈ ವಾಹನಗಳು ಹೊರಡುತ್ತವೆ. ನಿರೀಕ್ಷಸಿದಷ್ಟು ಪ್ರಯಾಣಿಕರು ಬರು ವವರೆಗೆ ವಾಹನಗಳು ಮುಂದೆ ಸಾಗುವುದಿಲ್ಲ. ಪ್ರಯಾಣಿಕರನ್ನು ಸೆಳೆಯಲು ವಾಹನದ ಚಾಲಕರು ಮತ್ತು ಸಹಾಯಕರು ಬಗೆಬಗೆಯ ತಂತ್ರಗಳನ್ನು ಅನುಸರಿಸುತ್ತಾರೆ.
`ಈ ರೀತಿಯ ವಾಹನಗಳಲ್ಲಿ ಪ್ರಯಾಣಿಸದೇ ನಮಗೆ ಬೇರೆ ಮಾರ್ಗ ಇಲ್ಲ. ಕಡಿಮೆ ಖರ್ಚಿನಲ್ಲೇ ನಮ್ಮ ಹಳ್ಳಿ ತಲುಪುತ್ತೇವೆ. ಬಸ್ಗಾಗಿ ತುಂಬಾ ಹೊತ್ತಿನವರೆಗೆ ಕಾಯಲು ಆಗುವುದಿಲ್ಲ. ವಾಹನ ಕಾಣಿಸಿದ ಕೂಡಲೇ ಹತ್ತಿ ಕೂತುಕೊಳ್ಳುತ್ತೇವೆ. ಕಡಿಮೆ ಖರ್ಚಿನಲ್ಲೇ ಬೇಗನೇ ಮನೆಗೆ ತಲುಪುತ್ತೇವೆ~ ಎನ್ನುವುದು ಅಸಹಾಯಕ ಪ್ರಯಾಣಿಕರ ಅಭಿಪ್ರಾಯ.
`ಚಾಲಕ ದಿಢೀರನೇ ಬ್ರೇಕ್ ಹಾಕಿದಾಗ ಭಯವಾಗುತ್ತೆ. ಕೆಳಗೆ ಬಿದ್ದುಬಿಡುತ್ತೇವೆ ಎಂಬ ಭೀತಿ ಕಾಡುತ್ತದೆ. ಆದರೆ ಟಾಪ್ ಪ್ರಯಾಣದಲ್ಲಿ ಸವಿಯೂ ಇದೆ. ಒಳಗೆ ಇಕ್ಕಟ್ಟಿನಲ್ಲಿ ಕೂರುವುದಕ್ಕಿಂತ ಇದು ಕೊಂಚ ಹಿತಾನುಭವ ನೀಡುತ್ತದೆ~ ಎಂದು ಯುವಕರು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.