ಶಿಡ್ಲಘಟ್ಟ: ಮನೆಯೊಂದರಲ್ಲಿ ಪತಿ ಮತ್ತು ಪತ್ನಿ ಮಲಗಿರುತ್ತಾರೆ. ನಸುಕಿನಲ್ಲಿ ಒಮ್ಮಿಂದೊಮ್ಮೆಲೇ ಭೂಕಂಪವಾಗುತ್ತದೆ. ಇದರಿಂದ ಆತಂಕಗೊಳ್ಳುವ ಪತ್ನಿ ತಕ್ಷಣವೇ ತನ್ನ ಪತಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಾಳೆ. `ರೀ..ಭೂಕಂಪ ಆಗ್ತಾ ಇದೆ. ಬೇಗ ಎದ್ದೇಳಿ...ನನಗೆ ಭಯವಾಗುತ್ತಿದೆ~ ಎಂದಳು. ಕಣ್ಣುಮುಚ್ಚಿಕೊಂಡೇ ನಿರಾತಂಕವಾಗಿ ಪತಿ ಉತ್ತರಿಸಿದ: ಇದು ನಮ್ಮ ಸ್ವಂತ ಮನೆಯಲ್ಲ. ಬಾಡಿಗೆ ಮನೆ. ಯಾಕೆ ಸುಮ್ಮನೆ ಭಯಪಡ್ತಿಯಾ?
***
ಯಾರಾದರೂ ಅಸ್ವಸ್ಥಗೊಂಡಿದ್ದರೆ, ಅವರಿಗೆ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ನೀವು 108 ದೂರವಾಣಿ ಸಂಖ್ಯೆಗೆ ಕರೆ ಮಾಡುತ್ತೀರಿ. ನೀವು 108 ಸಂಖ್ಯೆಗೆ ಕರೆ ಮಾಡಿದರೆ, ಅಂಬುಲೆನ್ಸ್ ನೇರವಾಗಿಯೇ ಮನೆಗೆ ಬರುತ್ತದೆ. ಒಂದು ವೇಳೆ ನೀವು 801 ಸಂಖ್ಯೆಗೆ ಕರೆ ಮಾಡಿದರೆ, ಅಂಬುಲೆನ್ಸ್ `ರಿವರ್ಸ್~ ಆಗಿ ಬರುತ್ತದೆ !
***
ಹೀಗೆ ಹತ್ತು ಹಲವು ಹಾಸ್ಯ ಚಟಾಕಿಗಳನ್ನು ಹೇಳಿ ನಗೆಗಡಲಲ್ಲಿ ತೇಲಿಸಿದವರು ಹಾಸ್ಯ ಕಲಾವಿದರಾದ ಗಂಗಾವತಿಯ ಪ್ರಾಣೇಶ್ `ಬೀಚಿ~, ನರಸಿಂಹ ಜೋಷಿ ಮತ್ತು ಬಸವರಾಜ್ ಮಹಾಮನಿ. ಸಂಸ್ಕಾರ ಭಾರತಿ ಸಂಘಟನೆಯ ಬುಧವಾರ ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಹಾಸ್ಯೋತ್ಸವದಲ್ಲಿ ಜನರನ್ನು ನಕ್ಕು ನಲಿಸಿದರು.
ಸಂಸ್ಕಾರ ಭಾರತಿ ಸಂಸ್ಥೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಪತಿ ಮಾತನಾಡಿ, `ಸದಾ ಕಾಲ ನಗುವುದರಿಂದ ಉತ್ತಮ ಆರೋಗ್ಯ ಕಾಯ್ದು ಕೊಳ್ಳಬಹುದು.
ದೀರ್ಘಯುಷಿಗಳಾಗಿ ಬಾಳಬಹುದು. ಈ ಕಾರಣದಿಂದಲೇ ಹಾಸ್ಯೋತ್ಸವ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲ್ಪಡುತ್ತಿವೆ~ ಎಂದರು.
ಸಂಸ್ಕಾರ ಭಾರತಿ ಸಂಘಟನೆಯ ಸಂಚಾಲಕರಾದ ಬಿ.ಸಿ.ನಂದೀಶ್, ಶ್ರೀಕಾಂತ್, ಕರುಣಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಿ.ಆರ್.ಶಿವಕುಮಾರಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.