ADVERTISEMENT

ಮಾನಸಿಕ ಕಿರುಕುಳವೇ ಕಾರಣ; ಆರೋಪ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 10:50 IST
Last Updated 21 ಅಕ್ಟೋಬರ್ 2011, 10:50 IST

ಚಿಕ್ಕಬಳ್ಳಾಪುರ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹಲವು ಊಹಾಪೋಹಳಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಅವರಿಗೆ ಬುಧವಾರ ರಾಜೀನಾಮೆ ಪತ್ರ ಸಲ್ಲಿಸಿದ ಅವರು,  ರಾಜೀನಾಮೆಗೆ ಮಾನಸಿಕ ಕಿರುಕುಳವೇ ಕಾರಣ  ಎಂದು ತಿಳಿಸಿದ್ದಾರೆ.

ಸರ್ಕಾರ ನಿಗದಿಪಡಿಸಿದ ಮೀಸಲಾತಿ ಆಧಾರದ ಮೇಲೆ ನೀವು ಅಧ್ಯಕ್ಷರಾಗಿದ್ದೀರಿ. ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಅದೃಷ್ಟ ಒಲಿದು ಬಂದಿದೆ. ನಿಮ್ಮ ಪಕ್ಷಕ್ಕೆ ಇಲ್ಲಿ ಕೋರಂ ಇಲ್ಲ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಅವರು ಪದೇ ಪದೇ ಹೇಳಿ ವ್ಯಂಗ್ಯವಾಡುತ್ತಿದ್ದರು. ಈ ಕಾರಣದಿಂದಲೇ ಮಾನಸಿಕ ಕಿರುಕುಳಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದೇನೆ  ಎಂದು ಮಂಜುಳಾ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಂಜುಳಾ ಅವರ ವಿರುದ್ಧ ಉಪಾಧ್ಯಕ್ಷರು ಮತ್ತು ಇತರ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸುವ ಮುನ್ನ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕಿತ್ತು. ಅವಿಶ್ವಾಸ ಮಂಡನೆಗೆ ಕಾರಣ ತಿಳಿಸಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದ ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಬೇಕಿತ್ತು ಎಂದು ಕಾಂಗ್ರೆಸ್ ಮುಖಂಡ ಪಿ.ಎನ್. ಕೇಶವರೆಡ್ಡಿ ತಿಳಿಸಿದರು.

ತಮಗೆ ಎಂಟು ಸದಸ್ಯರ ಬೆಂಬಲವಿದೆ ಎಂದು ಹೇಳಿ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ. ಆದರೆ ಅಧ್ಯಕ್ಷೆ ಮಂಜುಳಾ ಯಾವುದೇ ರೀತಿಯ ಅವ್ಯವಹಾರದ ಆರೋಪ ಮಾಡಿಲ್ಲ. ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುತ್ತಿಲ್ಲ ಎಂದು ಮಾತ್ರವೇ ಅವರು ಆರೋಪಿಸಿದ್ದಾರೆ ಎಂದು ಅವರು ಹೇಳಿದರು.

ವೆಂಕಟನಾರಾಯಣಪ್ಪ ಅವರು ಈ ಹಿಂದೆ ಮಂಡಲ್ ಪ್ರಧಾನರಾಗಿದ್ದಾಗ ಪಂಚಾಯಿತಿ ಹಣದಲ್ಲಿ ದ್ವಿಚಕ್ರ ವಾಹನ ಕೊಂಡಿದ್ದರು.  ಸರ್ಕಾರದ ಆಡಿಟ್ ವಿಷಯದಲ್ಲಿ ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಆದರೆ ಆಗ ರೈತ ಮುಖಂಡ ಕೆ.ಬಿ.ಪಿಳ್ಳಪ್ಪ ಅವರು ಬಾಕಿ ಹಣವನ್ನು ಪಾವತಿ ಮಾಡಿ, ಅವರನ್ನು ಪಾರು ಮಾಡಿದ್ದರು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.