ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣ ಬುಧವಾರ ರೈತರ ಪ್ರತಿಭಟನೆ, ರೈತಪರ ಸಂಘಟನೆಗಳ ಸದಸ್ಯರು, ಮಂಡಿ ಮಾಲೀಕರು, ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ, ರಸ್ತೆ ತಡೆ ಹಾಗೂ ಪ್ರತಿಭಟನೆಗೆ ಸಾಕ್ಷಿಯಾಯಿತು.
ಮಾವು ವಹಿವಾಟಿನಲ್ಲಿ ರೈತರು ಎದುರಿಸುತ್ತಿರುವ ತೊಂದರೆ ಬಗ್ಗೆ ಮಂಗಳವಾರ ರಾತ್ರಿ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಬುಧವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಎಪಿಎಂಸಿ ಕಚೇರಿಯಲ್ಲಿ ಎಪಿಎಂಸಿ ನಿರ್ದೇಶಕರು, ಅಧ್ಯಕ್ಷ ರಾಮಯ್ಯ, ಉಪಾಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಸಭೆ ಸೇರಿ ರೈತಪರ ಸಂಘಟನೆಗಳ ಬೇಡಿಕೆ ಈಡೇರಿಸುವ ಬಗ್ಗೆ ಚರ್ಚೆ ನಡೆಸಿದರು. ಈ ಚರ್ಚೆಯಲ್ಲಿ ಮಾವು ಬೆಳೆಗಾರರ ಪರ ಹೈಕೋರ್ಟ್ನಲ್ಲಿ ವಕಾಲತ್ತು ನಡೆಸುತ್ತಿರುವ ವಕೀಲ ಎಂ.ಶಿವಪ್ರಕಾಶ್ ಕೂಡ ಭಾಗವಹಿಸಿದ್ದರು.
ಮಧ್ಯಾಹ್ನ 12.30 ಗಂಟೆಯಾದರೂ ಸಭೆ ಯಾವುದೇ ತೀರ್ಮಾನಕ್ಕೆ ಬರದೇ ಹೋದಾಗ, ಕೆರಳಿದ ರೈತರು ಹಾಗೂ ರೈತಪರ ಸಂಘಟನೆಗಳ ಕಾರ್ಯಕರ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾರುಕಟ್ಟೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಅದೇ ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ಮಾವಿನ ಕಾಯಿ ತಂದ ಟ್ರ್ಯಾಕ್ಟರ್ ಒಂದನ್ನು ಮಾರುಕಟ್ಟೆ ಪ್ರವೇಶಿಸದಂತೆ ತಡೆದರು.
ಇದರಿಂದ ಕೆಂಡಾಮಂಡಲವಾದ ಮಂಡಿ ಮಾಲೀಕರು ಸ್ಥಳಕ್ಕೆ ಧಾವಿಸಿ ಬಂದು ಟ್ರ್ಯಾಕ್ಟರ್ ಒಳಗೆ ಬಿಡುವಂತೆ ಆಗ್ರಹಿಸಿದರು. ಅದಕ್ಕೆ ಪ್ರತಿಭಟನಾಕಾರರು ಒಪ್ಪದಿದ್ದಾಗ, ರೈತ ಸಂಘಟನೆಗಳ ಮುಖಂಡರು, ಮಾವು ವ್ಯಾಪಾರಿಗಳು, ಮಂಡಿ ಮಾಲೀಕರ ನಡುವೆ ಮಾತಿನ ಚಕಮಕಿ, ತಳ್ಳಾಟ ಏರ್ಪಟ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಆದರೂ ಪಟ್ಟು ಬಿಡದ ಪ್ರತಿಭಟನಕಾರರು, ಇ-ಟೆಂಡರ್ ಮೂಲಕ ಮಾವು ವಹಿವಾಟು ನಡೆಸಬೇಕು. ಬಿಳಿ ಚೀಟಿ ವ್ಯವಹಾರ ತಡೆಯಬೇಕು. ರೈತರಿಂದ ಕಮೀಷನ್ ಪಡೆಯುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು. ಮಾರುಕಟ್ಟೆ ಪ್ರಾಂಗಣದಲ್ಲಿ ರೈತರ ಪ್ರತಿಭಟನೆ ಬಿಸಿ ಹೆಚ್ಚುತ್ತಿದ್ದಂತೆ ಚುರುಕಾದ ಎಪಿಎಂಸಿ ಸಮಿತಿ ಕೆಲವು ತುರ್ತು ನಿರ್ಣಯ ಕೈಗೊಂಡು ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ರೈತ ಮುಖಂಡರನ್ನು ಕೋರಿತು. ಲಿಖಿತ ನಿರ್ಣಯಗಳನ್ನು ಬರೆದ ಪಟ್ಟಿಗೆ ಎಪಿಎಂಸಿ ಅಧ್ಯಕ್ಷ ರಾಮಯ್ಯ ಹಾಗೂ ಕಾರ್ಯದರ್ಶಿ ಎಂ.ಕೃಷ್ಣನ್ ಸಹಿ ಹಾಕಿ ನೀಡಿದ ಮೇಲೆ ರೈತ ಮುಖಂಡರು ಪ್ರತಿಭಟನೆ ಹಿಂದಕ್ಕೆ ಪಡೆದಿರುವುದಾಗಿ ಪ್ರಕಟಿಸಿದರು.
ಭರವಸೆಗಳು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಲೆಕ್ಕ ತೀರಿಸುವ ಪಟ್ಟಿ ಮೂಲಕ ಹರಾಜು ನಡೆಸಬೇಕು. ರೈತರ ದರ ಒಪ್ಪಿಗೆ ಪಡೆದು ಮಾವಿನ ಕಾಯಿ ವಿಲೇವಾರಿ ಮಾಡಲಾಗುವುದು. ಪ್ರತಿ 5 ಮಂಡಿಗೆ ಒಬ್ಬ ಅಧಿಕಾರಿ ನೇಮಿಸಲಾಗುವುದು. ಮೇಲುಸ್ತುವಾರಿ ವಹಿಸಿ ತೂಕ, ದರ, ಹರಾಜು ಲೆಕ್ಕ ತೀರುವಳಿ ಪಟ್ಟಿ, ಲಾಟ್ ಸಂಖ್ಯೆ ಪರಿಶೀಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ.
ಮಾರುಕಟ್ಟೆ ವ್ಯಾಪ್ತಿಯ ಪ್ರತಿ ಮಂಡಿಯಲ್ಲೂ ದರಪಟ್ಟಿ ಪ್ರದರ್ಶಿಸಲಾಗುವುದು. ಮೌಲ್ಯದ ಆಧಾರದ ಮೇಲೆ ಲೆಕ್ಕ ತೀರುವಳಿ ಪಟ್ಟಿಯೊಂದಿಗೆ ನಮೂದಿಸಿ ರೈತರಿಗೆ ನೀಡಲಾಗುವುದು. ಖರೀದಿದಾರರನ್ನು ಬರಮಾಡಿಕೊಂಡು ಮುಕ್ತ ಹರಾಜು ಮಾಡಲಾಗುವುದು. ಮಾವು ಬೆಳೆಗಾರರು ಬಿಳಿ ಚೀಟಿ ವ್ಯವಹಾರ ನಡೆಸುತ್ತಿರುವುದರ ಬಗ್ಗೆ ಸಾಕ್ಷಿ ಸಮೇತ ಹಿಡಿದುಕೊಟ್ಟರೆ, ಬಿಳಿ ಚೀಟಿ ವ್ಯವಹಾರ ನಡೆಸಿದ ಮಂಡಿ ಮಾಲೀಕರ ವಿರುದ್ಧ 24 ಗಂಟೆ ಒಳಗಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಖಾಸಗಿ ಮಾರುಕಟ್ಟೆ ಮತ್ತು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಏಕ ರೂಪ ನಿಯಮ ಜಾರಿಗೆ ತರಲು ಅಧಿಸೂಚನೆ ಹೊರಡಿಸುವಂತೆ ಎಪಿಎಂಸಿ ನಿರ್ದೇಶಕರಿಗೆ ಶಿಫಾರಸು ಮಾಡಲಾಗುವುದು. ಇವು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೈಗೊಂಡಿರುವ ತುರ್ತು ಕ್ರಮಗಳಾಗಿವೆ. ಆದರೆ ಇ-ಟೆಂಡರ್ ಜಾರಿ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಎನ್.ವೀರಪ್ಪರೆಡ್ಡಿ, ಪ್ರಧಾನ ಕಾರ್ಯದರ್ಶಿ ಪಿ.ಆರ್.ನವೀನ್ ಕುಮಾರ್, ಆನಂದ್, ತಾಲ್ಲೂಕು ಮಾವು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ವೆಂಕಟರೆಡ್ಡಿ, ಉಪಾಧ್ಯಕ್ಷ ಗೋವಿಂದರೆಡ್ಡಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥರೆಡ್ಡಿ, ಖಜಾಂಚಿ ವೆಂಕಟಾಚಲ, ತಾಲ್ಲೂಕು ಹಸಿರು ಸೇನೆ ಮುಖಂಡರಾದ ಬೈರೆಡ್ಡಿ, ದೇವರಾಜ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಸಿದ್ಧರಾಮಯ್ಯ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಸಬ್ ಇನ್ಸ್ಪೆಕ್ಟರ್ಗಳಾದ ಎಸ್.ಎಲ್.ಆರ್.ರೆಡ್ಡಿ. ಮಹದೇವಯ್ಯ ಅವರ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.