ADVERTISEMENT

ಮೂಲಸೌಲಭ್ಯ ವಂಚಿತ ಆದರ್ಶ ಶಾಲೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 5:50 IST
Last Updated 1 ಆಗಸ್ಟ್ 2012, 5:50 IST
ಮೂಲಸೌಲಭ್ಯ ವಂಚಿತ ಆದರ್ಶ ಶಾಲೆ
ಮೂಲಸೌಲಭ್ಯ ವಂಚಿತ ಆದರ್ಶ ಶಾಲೆ   

ಗೌರಿಬಿದನೂರು: ಪಟ್ಟಣದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮೂರು ವರ್ಷಗಳ ಹಿಂದೆ ಆದರ್ಶ ವಿದ್ಯಾಲಯ ಸ್ಥಾಪಿಸಲಾಗಿತ್ತು. ಆರಂಭದ ಉತ್ಸಾಹವು ಈಗ ಮಾಯವಾಗಿದೆ. ಸದ್ಯ ಶಾಲೆಯು ಮೂಲಸೌಲಭ್ಯಗಳು ಸಿಗದೆ ಸೊರಗುತ್ತಿದೆ.

ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ರಾಜ್ಯದಲ್ಲಿ ತಾಲ್ಲೂಕಿಗೆ ಒಂದು ಶಾಲೆಯಂತೆ ಇಲ್ಲಿ ಆರಂಭಿಸಲಾಗಿತ್ತು. ಶಾಲೆ ಆರಂಭವಾಗಿ ಮೂರು ವರ್ಷವಾದರೂ ಮೂಲಸೌಲಭ್ಯಗಳು ಈಗಲೂ ಸಿಗುವ ಲಕ್ಷಣ ಗೋಚರಿಸುತ್ತಿಲ್ಲ.

ಶಾಲೆಯಲ್ಲಿ ಪ್ರಸ್ತುತ 6,7 ಮತ್ತು 8ನೇ ತರಗತಿ ನಡೆಯುತ್ತಿವೆ. ಮೂರು ವರ್ಷಗಳಿಂದ ಮೂರೇ ಕೊಠಡಿಯಲ್ಲಿ ಸುಮಾರು 180 ವಿದ್ಯಾರ್ಥಿಗಳು ಕುಳಿತು ಪಾಠ ಪ್ರವಚನ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರ್ಶ ಶಾಲೆ ಮಕ್ಕಳಿಗೆ ಪ್ರತ್ಯೇಕ ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳು, ಸಮವಸ್ತ್ರ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಅಗತ್ಯವಿದೆ.

ಎಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಆದರ್ಶ ವಿದ್ಯಾಲಯ ಈ ಮೂರು ಶಾಲೆಗಳ ಮಕ್ಕಳು ಒಂದೇ ಆವರಣದಲ್ಲಿ ತರಗತಿ  ನಡೆಯುತ್ತಿವೆ. ಇತರೆ ಶಾಲೆಗಳಿಗಿಂತ ಭಿನ್ನವಾಗಿಸಲು ಪ್ರತ್ಯೇಕ ಕಟ್ಟಡ, ಸೌಲಭ್ಯ ನೀಡಲಾಗಿತ್ತು. ಆದರೆ ಈಗ ಸದ್ಯ ಎಲ್ಲವೂ ತದ್ವಿರುದ್ಧವಾಗಿದೆ ಎಂದು ಹೇಳುತ್ತಾರೆ ಪೋಷಕರು.

`ಆದರ್ಶ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವುದರಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮೂಲಸೌಕರ್ಯಗಳನ್ನು ನೀಡುವತ್ತ ಮಾತ್ರ ಸರ್ಕಾರ ಗಮನಹರಿಸುತ್ತಿಲ್ಲ~ ಎನ್ನುವುದು ಪೋಷಕರ ಅಭಿಪ್ರಾಯ.

ಇಲ್ಲಿನ ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗಿದೆ. ಖಾಯಂ ಮುಖ್ಯ ಶಿಕ್ಷಕರಿಲ್ಲದೆ ಶಾಲೆಯ ಪ್ರಗತಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗದ ಪರಿಸ್ಥಿತಿ. ಪ್ರತ್ಯೇಕ ಖಾಯಂ ಮುಖ್ಯ ಶಿಕ್ಷಕ, ಬೋಧಕ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಬೇಕು ಎಂದು ಸ್ಥಳೀಯರ ಒತ್ತಾಯಿಸುತ್ತಾರೆ.

ಪಟ್ಟಣದ ಹೊರವಲಯದ ಇಡಗೂರು ರಸ್ತೆಯಲ್ಲಿ ಆದರ್ಶ ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಸ್ಥಳ ನಿಗದಿಗೊಳಿಸಿಲಾಗಿದೆ. ಆದರೆ ಅಲ್ಲಿ ನೂತನ ಕಟ್ಟಡ ಯಾವಾಗ ಪ್ರಾರಂಭವಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಪಾಲಕರು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.