ADVERTISEMENT

ರೈತನಿಂದ ಲಂಚ ; ಆರೋಪಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 10:00 IST
Last Updated 13 ಜನವರಿ 2012, 10:00 IST

ಚಿಕ್ಕಬಳ್ಳಾಪುರ:  ರೈತನೊಬ್ಬನಿಂದ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಸಿಕ್ಕಿ ಬಿದ್ದ ಆರೋಪದ ಮೇಲೆ ಮಂಡಿಕಲ್ ಹೋಬಳಿಯ ಪ್ರಭಾರ ರಾಜಸ್ವ ನಿರೀಕ್ಷಕ ಎಸ್.ಗೋಪಾಲ್‌ಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂರು ವರ್ಷಗಳ ಸಾಮಾನ್ಯ ಸಜೆ ಮತ್ತು 15 ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡ ಪಾವತಿಸುವುದನ್ನು ತಪ್ಪಿಸಿದ್ದಲ್ಲಿ ಒಂದು ವರ್ಷ ಆರು ತಿಂಗಳು ಸಾಮಾನ್ಯ ಸಜೆಗೆ ಗುರಿಯಾಗಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಜಾಲ ಹೋಬಳಿಯ ಹೊಸಹಳ್ಳಿ ಗ್ರಾಮದ ಬಿ.ದೇವರಾಜ್ ಎಂಬುವರು ಮಂಡಿಕಲ್ ಹೋಬಳಿಯ ಯಲಗಲ ಹಳ್ಳಿ ಗ್ರಾಮದ ಬಳಿ ಖರೀದಿಸಿದ್ದ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಡುವಂತೆ ಎಸ್. ಗೋಪಾಲ್‌ಗೆ ಕೋರಿದ್ದರು.

ಇದಕ್ಕೆ 20 ಸಾವಿರ ರೂಪಾಯಿ ಲಂಚ ಕೇಳಿದ್ದ ಗೋಪಾಲ್ ಮುಂಗಡವಾಗಿ 7 ಸಾವಿರ ರೂಪಾಯಿ ಲಂಚ ಪಡೆದಿದ್ದ. ಇನ್ನೂ ರೂ.13 ಸಾವಿರ ಲಂಚಕ್ಕಾಗಿ ಒತ್ತಾಯಿಸುತ್ತಿದ್ದ.

ಇದಕ್ಕೆ ಸಂಬಂಧಿಸಿದಂತೆ ಬಿ.ದೇವ ರಾಜ್ ದೂರು ನೀಡಿದಾಗ, ತನಿಖೆಗೆ ಕ್ರಮ ಕೈಗೊಳ್ಳಲಾಯಿತು. 2006ರ ಸೆಪ್ಟೆಂಬರ್ 11ರಂದು ಲಂಚ ಪಡೆಯು ತ್ತಿದ್ದ ಆರೋಪದ ಗೋಪಾಲ್‌ಗೆ ಬಂಧಿಸಲಾಯಿತು ಎಂದು ಲೋಕಾ ಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.