ADVERTISEMENT

ರೈತರ ಹಿತ ಮರೆತ ಸರ್ಕಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:00 IST
Last Updated 7 ಫೆಬ್ರುವರಿ 2011, 10:00 IST

ಚಿಂತಾಮಣಿ: ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಹಿತವನ್ನೆ ಮರೆತಿದ್ದಾರೆ. ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಿಗಿಂತ ಭಿನ್ನ ಆಡಳಿತ ನಡೆಸುತ್ತೇವೆಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆಡಳಿತದ ಮೂಲಕ ಕರ್ನಾಟಕಕ್ಕೆ ಕೆಟ್ಟ ಹೆಸರು ತಂದಿದೆ ಎಂದು ಡಿವೈಎಫ್‌ಐನ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಮುನಿವೆಂಕಟಪ್ಪ ಕಿಡಿಕಾರಿದರು.

ಡಿವೈಎಪ್‌ಐ ತಾಲ್ಲೂಕು ಸಮಿತಿ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಯುವಜನರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರವು ಕೇವಲ ಒಂದೆ ಅವಧಿಯಲ್ಲಿ ಎಂದೂ ಕಂಡು ಕೇಳರಿಯದಷ್ಟು ಹಗರಣಗಳಲ್ಲಿ ಭಾಗಿಯಾಗಿದೆ. ತಮ್ಮ ಕುಟುಂಬ, ತಮ್ಮ ಸ್ನೇಹಿತರು ಉದ್ದಾರವಾದರೆ ಸಾಕು ಎಂಬ ಮನೋಭಾವ ಹೊಂದಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ಮಕೈಗೊಳ್ಳಬೇಕೆಂದು ಅಗ್ರಹಿಸಿದರು.

ಜಿಲ್ಲಾ ಸಮಿತಿಯ ಸದಸ್ಯ ಕೃಷ್ಣಾರೆಡ್ಡಿ ಮಾತನಾಡಿ ದೇಶದಲ್ಲಿ ಯುಜನತೆಗೆ ಮಾಡಲು ಉದ್ಯೋಗವಿಲ್ಲದೆ ತಮ್ಮ ಪೋಷಕರನ್ನು ಸಾಕಲಾಗದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಹಲವಾರು ನೆಪಗಳನ್ನು ಒಡ್ಡಿ ಇರುವ ಉದ್ಯೋಗಗಳನ್ನು ಸಹ ಸರ್ಕಾರ ಕಡಿತಗೊಳಿಸುತ್ತಿದೆ. ಯುವಜನತೆಗೆ ದುಡಿಯುವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು. ಕೈಗಾರಿಕೆಗಳು ಸ್ಥಾಪನೆಯಿಂದ  ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಸ್ಥಳೀಯವಾಗಿ ಲಭ್ಯವಾಗುವಂತಹ ಕೃಷಿ ಆಧಾರಿತ ಕೈಗಾರಿಕೆಗಳನ್ನು ಮಾತ್ರ ಸ್ಥಾಪಿಸಬೇಕು. ರೈತರ ಜಮೀನನ್ನು ಕಿತ್ತುಕೊಂಡು ಯಾವುದೋ ಕಂಪನಿಗಳಿಗೆ ನೆರವಾಗುವ ದೃಷ್ಠಿಯಿಂದ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಖಂಡಿತಾ ಉದ್ದೇಶ ಈಡೇರುವುದಿಲ್ಲ.

 ಗ್ರಾಮೀಣ ಪ್ರದೇಶದ ಕೃಷಿ ಆಧಾರಿತ ನಿರುದ್ಯೋಗಿ ಯುವಜನರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕು ಎಂದರು.ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳ ಜನತೆ ಹಾಗೂ ಜಾನುವಾರುಗಳು ನೀರಿಲ್ಲದೆ ತತ್ತರಿಸುವಂತಾಗಿದೆ. ಸಾವಿರಾರು ಅಡಿಗಳ ಆಳದಿಂದ ಬರುವ ವಿಷಯುಕ್ತ ನೀರನ್ನು ಕುಡಿಯುವ ಮೂಲಕ ಆಯಸ್ಸನ್ನು ಕ್ಷೀಣಿಸಿಕೊಂಡು ಅನೇಕ ರೋಗರುಜಿನುಗಳಿಗೆ ತುತ್ತಾಗಿ ಅಂಗವಿಕಲರಾಗುತ್ತಿದ್ದಾರೆ.

ಶಾಶ್ವತ ನೀರಾವರಿಯನ್ನು ಒದಗಿಸುವ ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರದಿದ್ದರೆ ಹಂತ ಹಂತವಾಗಿ ಹೋರಾಟಗಳನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು.ತಾಲ್ಲೂಕು ಸಮಿತಿಯ ಅಧ್ಯಕ್ಷ ಬಾಬಾಜಾನ್ ಅಧ್ಯಕ್ಷತೆ ವಹಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.