ADVERTISEMENT

ವಿದ್ಯಾರ್ಥಿಗಳಿಂದ ವೃಕ್ಷ ನವರಾತ್ರಿ ಶಿಬಿರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:40 IST
Last Updated 8 ಅಕ್ಟೋಬರ್ 2011, 10:40 IST

ಚಿಕ್ಕಬಳ್ಳಾಪುರ: `ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅಮೂಲ್ಯವಾದದ್ದು. ಪ್ರಸ್ತುತ ಜಿಲ್ಲೆಯ ಅರಣ್ಯ ಪ್ರಮಾಣ  ಶೇ 15ರಷ್ಟಿದ್ದು, ಶೇ 30ಕ್ಕೆ ಹೆಚ್ಚಿಸಲು ಯುವಜನರು ಪಣತೊಡಬೇಕಿದೆ ಎಂದು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಐ.ವಿ. ನಾಗೇಶ್ ತಿಳಿಸಿದರು.

ತಾಲ್ಲೂಕಿನ ಶ್ರೀನಿವಾಸಸಾಗರ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಈಚೆಗೆ ನಡೆದ ವೃಕ್ಷ ನವ ರಾತ್ರಿ ಶಿಬಿರದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, `ಸಸಿಗಳನ್ನು ನೆಟ್ಟರೆ ಸಾಲದು, ಅವುಗಳ ಸಂರಕ್ಷಣೆಯ ಹೊಣೆ ಹೊರಬೇಕು~ ಎಂದರು.

`ಅರಣ್ಯ ಪ್ರದೇಶದ ವಿಸ್ತರಣೆ ಮತ್ತು ಸಸಿಗಳ ವಿತರಣೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ವಿವಿಧ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಹಂತಹಂತವಾಗಿ ಜಾರಿಗೆ ತರಲಿದೆ. ಸಸಿಗಳನ್ನು ನೆಡುವ ಕಾರ್ಯದಲ್ಲಿ ಯುವಜನರನ್ನು ಪ್ರೋತ್ಸಾಹಿ ಸಲಿದೆ~ ಎಂದು ಅವರು ತಿಳಿಸಿದರು.

ಪ್ರೊ. ಬಿ.ವಿ.ಕೃಷ್ಣಪ್ಪ ಮಾತನಾಡಿ, `ಹಬ್ಬ ಹರಿದಿನಗಳಲ್ಲಿ ಅನಗತ್ಯವಾಗಿ ಕಾಲ ವ್ಯಯ ಮಾಡು ವುದರ ಬದಲು ಸಸಿಗಳನ್ನು ನೆಡುವ ಕಾರ್ಯ ಕ್ರಮವನ್ನು ವಿದ್ಯಾರ್ಥಿಗಳು ಹಮ್ಮಿಕೊಂಡಿರುವುದು ಸಂತಸ ಉಂಟು ಮಾಡಿದೆ ಎಂದರು.

ವಲಯ ಅರಣ್ಯಾಧಿಕಾರಿ ಸುರೇಶ್ ಕುಮಾರ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಾಷಾ, ಜಿಲ್ಲಾ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ರಾಮೇ ಗೌಡ, ಕಾರ್ಯದರ್ಶಿ ಗುಂಪುಮರದ ಆನಂದ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಬಿ.ಆರ್.ವೆಂಕಟ ರಾಮು,  ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಬಾಲಪ್ಪ, ಪ್ರೊ. ಎಲ್. ನಾರಾಯಣಸ್ವಾಮಿ, ಪ್ರೊ. ಮುರಳಿ ಆನಂದ್, ನರಸಿಂಹಮೂರ್ತಿ ಇತರರಿದ್ದರು. 250ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.