ADVERTISEMENT

ಶಿಥಿಲ ಕಂಬದಿಂದ ಕಾದಿದೆ ಅಪಾಯ?

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 10:19 IST
Last Updated 3 ಏಪ್ರಿಲ್ 2013, 10:19 IST

ಗೌರಿಬಿದನೂರು: ಪಟ್ಟಣದ ಬಜಾರ್ ರಸ್ತೆಯ ಬದಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ಕಂಬ ಯಾವುದೇ ಕ್ಷಣ ಉರುಳಿ ಬೀಳುವ ಸ್ಥಿತಿಯಲ್ಲಿದ್ದು, ಅಲ್ಲಿನ ವ್ಯಾಪಾರಸ್ಥರು ಮತ್ತು ಪಾದಚಾರಿಗಳು ಆತಂಕಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕೊಂಚ ಹಾನಿಯಾಗಿದ್ದ ಕಂಬವು ಇದುವರೆಗೆ ತೆರವುಗೊಂಡಿಲ್ಲ.

`ಪಟ್ಟಣದ ಕಿರಿದಾದ ಬಜಾರ್ ರಸ್ತೆಯಲ್ಲಿ ಸರಕು ಸಾಗಾಣಿಕೆಯ ಬೃಹತ್ ವಾಹನಗಳು ಸಂಚರಿಸುತ್ತವೆ. ಕೆಲ ದಿನಗಳ ಹಿಂದೆಯಷ್ಟೇ ಅಪರಿಚಿತ ವಾಹನವೊಂದು ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ಸಂದರ್ಭದಲ್ಲಿ ಕಂಬಕ್ಕೆ ಕೊಂಚ ಹಾನಿಯಾಗಿತ್ತು. ಶಿಥಿಲಗೊಂಡಿರುವ ಕಂಬವು ಯಾವುದೇ ಕ್ಷಣ ಉರುಳಿ ಬೀಳುವ ಸಾಧ್ಯತೆಯಿದ್ದು, ಕೂಡಲೇ ಅದನ್ನು ತೆರವುಗೊಳಿಸುವಂತೆ ಬೆಸ್ಕಾಂ ಇಲಾಖೆಗೆ ದೂರು ನೀಡಿದ್ದೆವು. ಆದರೆ ಕಂಬವನ್ನು ತೆರವುಗೊಳಿಸಲು ಬೆಸ್ಕಾಂ ಅಧಿಕಾರಿ ಅಥವಾ ಸಿಬ್ಬಂದಿ ಮುಂದಾಗಿಲ್ಲ' ಎಂದು ವರ್ತಕ ಗುಪ್ತಾ ಅಸಮಾಧಾನ ವ್ಯಕ್ತಪಡಿಸಿದರು.

`ಬಜಾರ್ ರಸ್ತೆಯಲ್ಲಿ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಓಡಾಡುತ್ತಾರೆ. ರಸ್ತೆಯು ಯಾವಾಗಲೂ ವಾಹನ, ಜನದಟ್ಟಣೆಯಿಂದ ಕೂಡಿರುತ್ತದೆ. ಭಾರಿ ಮಳೆ ಅಥವಾ ಗಾಳಿ ಬೀಸಿದ ಸಂದರ್ಭದಲ್ಲಿ ಕಂಬ ಉರುಳಿಬಿದ್ದರೆ, ಭಾರಿ ಅನಾಹುತವೇ ಸಂಭವಿಸುತ್ತದೆ. ಅನಾಹುತ ಸಂಭವಿಸುವ ಮುನ್ನವೇ ಬೆಸ್ಕಾಂ ಸಿಬ್ಬಂದಿ ಕಂಬ ತೆರವುಗೊಳಿಸಬೇಕು' ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.